Saturday, December 19, 2009

ದೇಶಪ್ರೇಮದ ಆಯಾಮಗಳು...

ಕನ್ನಡಿಗರ ಪಾಲಿಗೆ ಕುಂಟೆಗೋಡು ವಿಭೂತಿ ಸುಬ್ಬಣ್ಣ ಯಾವತ್ತಿಗೂ ಒಂದು ಅಚ್ಚರಿಯೇ ಸರಿ. ಮೈಸೂರಿನ ಮಾನಸಗಂಗೋತ್ರಿಯಲ್ಲಿ ತಮ್ಮ ಸ್ನಾತಕೋತ್ತರ ಅಧ್ಯಯನ ಮುಗಿಸಿದ ಕೆ. ವಿ. ಸುಬ್ಬಣ್ಣ ಮನಸ್ಸು ಮಾಡಿದ್ದರೆ ನಾಡಿನ ಯಾವುದಾದರೂ ವಿಶ್ವವಿದ್ಯಾಲಯದ ಆಯಕಟ್ಟಿನ ಜಾಗವನ್ನು ಆಕ್ರಮಿಸಿ ಕೂರಬಹುದಿತ್ತು. ಬಹುಷ: ಅವರು ಹಾಗೆ ಮಾಡಿದ್ದರೆ ತಮ್ಮ ನಿವೃತ್ತಿಯ ಅಂಚಿಗೆ ಬರುವ ಹೊತ್ತಿಗೆ ಒಂದಿಷ್ಟು ವಿದೇಶ ಪ್ರವಾಸ, ಒಂದಿಷ್ಟು ಡಾಕ್ಟರೇಟ್ ಡಿಗ್ರಿಗಳನ್ನು ತಮ್ಮ ಮುಡಿಗೇರಿಸಿಕೊಂಡಿರುತ್ತಿದ್ದರು.

ಆದರೆ ಸುಬ್ಬಣ್ಣ ಹಾಗೆ ಮಾಡಲಿಲ್ಲ. ತಮ್ಮ ಊರಾದ ಹೆಗ್ಗೋಡಿಗೆ ವಾಪಸಾದ ಸುಬ್ಬಣ್ಣ ಅಲ್ಲಿಯೇ ನೀಲಕಂಠೇಶ್ವರ ನಾಟಕ ಸಂಘವನ್ನು ಕಟ್ಟಿದರು. ಬಹುಷ: ಜಾಗತಿಕ ರಂಗಭೂಮಿಯ ಯಾವ ಗಾಳಿಯೂ ಬೀಸದಿದ್ದ ಹೆಗ್ಗೋಡಿನಲ್ಲಿ ರಂಗಚಟುವಟಿಕೆಗಳನ್ನು ಆರಂಭಿಸಿದರು. ನೋಡನೋಡುತ್ತಿದ್ದ ಹಾಗೆ ನೀನಾಸಂ ಅನ್ನು ಜಗವೇ ಮೆಚ್ಚುವ ರೆಪರ್‍ಟರಿಯನ್ನಾಗಿಸಿದರು. ಕೆ ವಿ ಸುಬ್ಬಣ್ಣ ಕೇವಲ ವ್ಯಕ್ತಿಯಾಗುಳಿಯಲಿಲ್ಲ; ಈ ನಾಡಿನ ಪ್ರಜ್ಞೆಯಾಗಿ ಬೆಳೆದರು. ಕನ್ನಡ ರಂಗಭೂಮಿಯ ’ಗಾಂಧಿ’ಯಾದರು.

***

ಕೈಗೆ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಸಂಬಳ ತರುವ ಕೆಲಸ ಬ್ಲಿಟ್ಜ್ ಪತ್ರಿಕೆಯಲ್ಲಿತ್ತು. ಕೆಲ ಕಾಲ ಆ ಕೆಲಸವನ್ನು ಮಾಡಿದ ಪಿ ಸಾಯಿನಾಥ್‌ಗೆ ಅದೇಕೋ ಇದ್ದಕ್ಕಿದ್ದಂತೆ ಆ ಕೆಲಸ ತಮಗೆ ಸರಿಹೊಂದುವುದಿಲ್ಲ ಅಂತ ಅನಿಸಿಬಿಟ್ಟಿತು. ಸರಿ, ತಮ್ಮ ಪೆನ್ನು, ಪುಸ್ತಕ ಹಿಡಿದು ಬ್ಯಾಗ್ ಹೆಗಲಿಗೇರಿಸಿ ಹೊರಟ ಸಾಯಿನಾಥ್ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಕದ ತಟ್ಟಿದರು. ಟೈಮ್ಸ್ ಪತ್ರಿಕೆಯ ಫೆಲೋಶಿಪ್ ದೊರೆತದ್ದೇ ಈ ದೇಶದ ಹಳ್ಳಿಗಳ ದಾರಿ ಹಿಡಿದ ಸಾಯಿನಾಥ್, ಈ ದೇಶದ ಬೆನ್ನೆಲುಬು ಅಂತ ಕರೆಸಿಕೊಳ್ಳುವ - ಆದರೆ ಎಲ್ಲರಿಂದಲೂ ತಿರಸ್ಕಾರಕ್ಕೆ ಒಳಪಟ್ಟ - ರೈತರ ನೋವು-ನಲಿವುಗಳ ಬಗ್ಗೆ ಸಾಲು ಸಾಲು ಲೇಖನ ಬರೆದರು.

ತಾನು ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ, ಮಾಜಿ ರಾಷ್ಟಪತಿ ವಿ ವಿ ಗಿರಿಯವರ ಮೊಮ್ಮಗ ಎಂಬ ಬಿಗುಮಾನಗಳು ಸಾಯಿನಾಥ್ ಕಡೆ ಸುಳಿಯಲಿಲ್ಲ. ಈ ದೇಶದ ಅಸಂಖ್ಯ ಹಳ್ಳಿಗಳನ್ನು ಕಾಲುನಡಿಗೆಯಲ್ಲಿ ಸುತ್ತಿದರು (ಅವು ಸುಮಾರು ಐದು ಸಾವಿರ ಕಿಲೋಮೀಟರುಗಳಷ್ಟು ದೂರ). ಸಾದಾ ಪತ್ರಕರ್ತನಾಗಿ ಉಳಿಯದೇ, ಹೆಸರಾಂತ ದೈನಿಕದ ಹಿರಿಯ ಸಿಬ್ಬಂದಿಯಾಗಿ ಸೀಮಿತವಾಗದೆ ಈ ನಾಡಿನ ಅಸಂಖ್ಯ ಪತ್ರಕರ್ತರ ಸಾಕ್ಷಿಪ್ರಜ್ಞೆಯಾಗಿ ಬೆಳೆದುನಿಂತರು.

ಅದಿರಲಿ, ಇವತ್ತಿನ ಯುವ ಮನಸ್ಸುಗಳ ಪಾಲಿಗೆ ಸುಬ್ಬಣ್ಣ ಅಥವಾ ಸಾಯಿನಾಥ್ ಏಕೆ ದೇಶಪ್ರೇಮಿಗಳಂತೆ ಕಾಣಿಸುತ್ತಿಲ್ಲ? ಅವರು ಮಾಡುವ ಕೆಲಸಗಳು ರಾಷ್ಟ್ರನಿರ್ಮಾಣದ ಕೆಲಸ ಅಂತ ಏಕೆ ಅನಿಸುತ್ತಿಲ್ಲ?

ಇಲ್ಲಿ ಸುಬ್ಬಣ್ಣ ಮತ್ತು ಸಾಯಿನಾಥ್ ಮಾತ್ರ ದೇಶಪ್ರೇಮಿಗಳಂತೆ ಕಾಣಿಸುತ್ತಿಲ್ಲ ಎಂದಲ್ಲ. ಕರ್ನಾಟಕದ ಅಡಿಕೆ ಬೆಳೆಗಾರರಿಗೆ ಒಂದು ಗೌರವ ತಂದುಕೊಟ್ಟ ಸಂಸ್ಥೆಗಳಾದ ಕ್ಯಾಂಪ್ಕೋದ ಸಂಸ್ಥಾಪಕ ದಿವಂಗತ ವಾರಣಾಶಿ ಸುಬ್ರಾಯ ಭಟ್ ಅಥವಾ ಶಿರಸಿಯ ಟಿಎಸ್‌ಎಸ್ ಸಂಸ್ಥೆಯ ಜನಕ ದಿವಂಗತ ಕಡವೆ ಶ್ರೀಪಾದ ಹೆಗಡೆ, ನಮ್ಮ ನಾಡಿನ ರೈತರ ಸಾಕ್ಷಿಪ್ರಜ್ಞೆಯಂತಿದ್ದ ಪ್ರೊ. ಎಂ ಡಿ ನಂಜುಂಡಸ್ವಾಮಿ, ನಾಡಿನ ರಾಜಕಾರಣಿಗಳಿಗೆ ಹೇಗೆ ಬದುಕಬೇಕು ಎಂದು ತೋರಿಸಿಕೊಟ್ಟ ಶಾಂತವೇರಿ ಗೋಪಾಲಗೌಡ, ಪರಿಸರ ಹೋರಾಟದಲ್ಲೇ ಬದುಕು ಕಂಡುಕೊಂಡ ಸುಂದರಲಾಲ್ ಬಹುಗುಣ ಇವತ್ತಿನ ಯುವ ಮನಸ್ಸುಗಳಲ್ಲಿರುವ ದೇಶಭಕ್ತರ ಪಟ್ಟಿಯಲ್ಲಿ ಸ್ಥಾವನ್ನೇಕೆ ಗಿಟ್ಟಿಸುತ್ತಿಲ್ಲ?

ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗುವುದು, ಚೀನಾದ ವಿರುದ್ಧ ಭಾಷಣ ಮಾಡುವುದು ಮಾತ್ರ ದೇಶಪ್ರೇಮ ಎಂಬ ಭಾವನೆ ನಮ್ಮ ಮನದಲ್ಲಿ ಮೂಡಲು ಕಾರಣವೇನು? ಹಾಗಂತ ಇವು ದೇಶಪ್ರೇಮ ಅಲ್ಲ ಎಂದು ಖಂಡಿತಾ ಹೇಳುತ್ತಿಲ್ಲ. ಆದರೆ ದೇಶದ ಆಂತರಿಕ ಸಮಸ್ಯೆಗಳ ನಿರ್ಮೂಲನೆಗೆ ಟೊಂಕ ಕಟ್ಟಿ ದುಡಿಯುವುದೂ ದೇಶಪ್ರೇಮ ಎಂಬ ಭಾವನೆ ನಮ್ಮಲ್ಲೇಕೆ ಮೂಡುತ್ತಿಲ್ಲ?

ಹಿಂದೊಂದು ಕಾಲವಿತ್ತು. ಅಂದರೆ ದೇಶಕ್ಕೆ ಸ್ವಾತಂತ್ರ್ಯ ಇನ್ನೂ ದೊರೆತಿಲ್ಲದ ಕಾಲ. ಆಗ ಇಡೀ ದೇಶವಾಸಿಗಳ ಪಾಲಿಗೆ ಬ್ರಿಟಿಷರು ಸಮಾನ ಶತ್ರುಗಳಾಗಿದ್ದರು. ಅವತ್ತಿನ ಎಲ್ಲ ರಾಷ್ಟ್ರನಾಯಕರ ಹೋರಾಟ ಬ್ರಿಟಿಷರ ವಿರುದ್ಧ ಇದ್ದೇ ಇತ್ತು. ಗಾಂಧೀಜಿ ಆದಿಯಾಗಿ ಸಾವರ್ಕರ್ ವರೆಗೆ ಪ್ರತಿಯೊಬ್ಬರೂ ತಮ್ಮ ದೇಶಭಕ್ತಿಯ ಪ್ರಕಟೀಕರಣಕ್ಕೆ ಬ್ರಿಟಿಷರ ವಿರುದ್ಧದ ಹೋರಾಟವನ್ನು ಒಂದು ಮಾರ್ಗವನ್ನಾಗಿಸಿಕೊಂಡಿದ್ದರು. ಅದು ಅವತ್ತಿನ ಅನಿವಾರ್ಯವೂ ಆಗಿತ್ತು. ಮೊದಲು ದೇಶಕ್ಕೆ ಸ್ವಾತಂತ್ರ್ಯ ಸಿಗಲಿ ಆಮೇಲೆ ದೇಶದ ಉಳಿದ ಸಮಸ್ಯೆಗಳ ಬಗ್ಗೆ ಗಮನ ಹರಿಸೋಣ ಎಂಬ ನಿಲುವು ಅವತ್ತಿನ ಮಟ್ಟಿಗೆ ಸರಿಯೇ ಆಗಿತ್ತು. ಹಾಗಾಗಿಯೇ ಅವತ್ತು ಇಡೀ ದೇಶವಾಸಿಗಳ ಮನದಲ್ಲಿ ಬ್ರಿಟಿಷ್ ಸಾಮಾನ್ಯ ಶತ್ರುವಾಗಿದ್ದ. ಅಂಥ ಶತ್ರುವಿನ ವಿರುದ್ಧ ಹೋರಾಡುವುದೇ ದೇಶಭಕ್ತಿಯ ಪ್ರಕಟೀಕರಣಕ್ಕೆ ಇರುವ ದಾರಿ ಎಂಬ ಭಾವನೆ ಎಲ್ಲರಲ್ಲೂ ಮೂಡಿತು.

ಸ್ವಾತಂತ್ರ್ಯಾನಂತರದ ಪರಿಸ್ಥಿತಿ ಬೇರೆಯದೇ ಆಯಿತು. ಆಗ ಸ್ವಲ್ಪ ಕಾಲ ದೇಶಕ್ಕೆ ಯಾವುದೇ ’ಸಾಮಾನ್ಯ ಶತ್ರು’ ಅಂತ ಇರಲಿಲ್ಲ. ಆದರೆ ಆ ಪರಿಸ್ಥಿತಿ ಕೆಲವೇ ದಿನಗಳಿಗೆ ಸೀಮಿತವಾಯಿತು. ತನ್ನ ಪಾಡಿಗೆ ತಾನಿದ್ದು, ತನ್ನ ಜನರ ಅಭಿವೃದ್ಧಿಯ ಬಗ್ಗೆ ಆಲೋಚಿಸಿಕೊಂಡಿರಬಹುದಾಗಿದ್ದ ಪಾಕಿಸ್ತಾನ ವಿನಾ ಕಾರಣ ಭಾರತಕ್ಕೆ ಉಪಟಳ ನೀಡಲು ಆರಂಭಿಸಿತು. ಪಾಕಿಸ್ತಾನದ ಹುಟ್ಟಿನೊಂದಿಗೇ ಒಂದಷ್ಟು ಯುದ್ಧಗಳು ಭಾರತದ ಪಾಲಿಗೆ ಅನಿವಾರ್ಯವಾಗಿ ಬಂದೆರಗಿದವು. ಹಾಗಾಗಿ ಆ ಸಂದರ್ಭದಲ್ಲಿ ಮತ್ತೊಮ್ಮೆ ದೇಶಕ್ಕೆ ಸಾಮಾನ್ಯ ಶತ್ರುವೊಬ್ಬ ಹುಟ್ಟಿದ. ಪಾಕಿಸ್ತಾನದ ವಿರುದ್ಧ ನಡೆದ ೧೯೪೮ರ ಯುದ್ಧ, ೧೯೭೧ರ ಯುದ್ಧ, ೧೯೬೫ರ ಯುದ್ಧ ಮತ್ತು ೧೯೯೯ರ ಕಾರ್ಗಿಲ್ ಯುದ್ಧಗಳು ಆ ದೇಶ ಭಾರತೀಯರ ಪಾಲಿಗೆ ಸಾರ್ವಕಾಲಿಕ ಶತ್ರುವನ್ನಾಗಿಸಿದವು. ಇದಕ್ಕೆ ಕಲಶಪ್ರಾಯವಾಗಿ ಪಾಕಿಸ್ತಾನ ಲಾಗಾಯ್ತಿನಿಂದಲೂ ಪ್ರಾಯೋಜಿಸಿಕೊಂಡು ಬರುತ್ತಿರುವ ಧರ್ಮ ಆಧಾರಿತ ಗಡಿಯಾಚೆಗಿನ ಭಯೋತ್ಪಾದನೆ ಕೂಡ ಭಾರತೀಯರು ಪಾಕಿಸ್ತಾನವನ್ನು ತಮ್ಮ ಶತ್ರು ಎಂದು ಗಟ್ಟಿಯಾಗಿ ಅಂದುಕೊಳ್ಳಲು ಕಾರಣಗಳಾದವು.

೧೯೬೨ರಲ್ಲಿ ಚೀನಾದ ವಿರುದ್ಧ ನಡೆದ ಯುದ್ಧದಲ್ಲಿ ಭಾರತ ಅನುಭವಿಸಿದ ಅಪಮಾನಕಾರಿ ಸೋಲು ಮತ್ತು ಅಂದಿನಿಂದ ಚೀನಾ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ’ಗಡಿತಂಟೆ’ ಚೀನಾ ಕೂಡ ನಮ್ಮ ಶತ್ರು ಎಂಬ ಭಾವನೆಯನ್ನು ಬೆಳೆಸಿತು.

ಇವೆರಡರ ಜೊತೆಗೆ ಬಾಂಗ್ಲಾದೇಶ ತನ್ನ ನಾಗರಿಕರನ್ನು ಅಕ್ರಮವಾಗಿ ಭಾರತದೊಳಕ್ಕೆ ನುಸುಳುವಂತೆ ಮಾಡುವುದು ಮತ್ತು ಆ ನಾಗರಿಕರು ಭಾರತದಲ್ಲಿ ಇದ್ದುಕೊಂಡೇ, ಈ ದೇಶದ ವಿರುದ್ಧ ವ್ಯವಸ್ಥಿತ ಪಿತೂರಿಯಲ್ಲಿ ತೊಡಗಿಕೊಂಡಿರುವುದು ಬಾಂಗ್ಲಾದೇಶವನ್ನು ನಮ್ಮ ದೇಶವಾಸಿಗಳ ಪಾಲಿಗೆ ಒಬ್ಬ ಸಮಾನ ಶತ್ರುವನ್ನಾಗಿಸಿದೆ.

ಹೇಗಿದ್ದರೂ ಸ್ವಾತಂತ್ರ ಪೂರ್ವದ ಕಾಲದಿಂದಲೇ ಶತ್ರುವಿನ ವಿರುದ್ಧ ಹೋರಾಡುವುದು ದೇಶಭಕ್ತಿಯ ಪ್ರಕಟೀಕರಣಕ್ಕೆ ಇರುವ ದಾರಿ ಎಂಬ ಭಾವನೆ ನಮ್ಮಲ್ಲಿ ಅಸಂಖ್ಯ ಮಂದಿಯ ಮನದಲ್ಲಿ ಬೆಳೆದುಬಿಟ್ಟಿತ್ತು. ಅಂಥ ಸಂದರ್ಭದಲ್ಲೇ ಉಗಮವಾದ ಹೊಸ ಸಾಮಾನ್ಯ ಶತ್ರುಗಳು ದೇಶಪ್ರೇಮದ ಬಗೆಗಿನ ನಮ್ಮ ದೃಷ್ಟಿಕೋನ ಬೇರೆ ಆಗದಂತೆ ತಡೆದವು. ಹಾಗಾಗಿಯೇ ಸೈನ್ಯಕ್ಕೆ ಸೇರುವುದು, ಯುದ್ಧದಲ್ಲಿ ಭಾಗವಹಿಸುವುದು ಅಥವಾ ಪಾಕಿಸ್ತಾನ, ಚೀನಾ, ಬಾಂಗ್ಲಾದೇಶಗಳ ವಿರುದ್ಧ ತಾರಕ ಸ್ವರದಲ್ಲಿ ಘೋಷಣೆ ಕೂಗುವುದು ಮಾತ್ರ ದೇಶಪ್ರೇಮ ಎಂಬ ಭಾವನೆ ನಮ್ಮ ಮನದಲ್ಲಿ ಮೂಡುವಂತೆ ಮಾಡಿದೆ.

ದೇಶದ ಸಾಮಾನ್ಯ ಶತ್ರುಗಳ ವಿರುದ್ಧ ಹೋರಾಟ ನಡೆಸುವುದರ ಜೊತೆಗೆ ಬೇರೆ ಸಮಸ್ಯೆಗಳನಿವಾರಣೆಯ ಬಗ್ಗೆ ಕೆಲಸ ಮಾಡುವುದೂ ದೇಶಪ್ರೇಮದ ಪ್ರಕಟೀಕರಣದ ಮಾರ್ಗವೇ ಹೌದು ಎಂದು ಅರ್ಥಮಾಡಿಕೊಳ್ಳುವಾಗ ಇನ್ನೊಂದು ಸೂಕ್ಷ್ಮ ವಿಚಾರದ ಬಗ್ಗೆ ನಮ್ಮ ಗಮನ ಇರಲೇಬೇಕು. ಇವತ್ತು ನಾವು ದೇಶಭಕ್ತಿಯ ಮಾದರಿಗಳು ಎಂದು ತಿಳಿದಿರುವ ನಮ್ಮ ಯೋಧರ ದೇಶಪ್ರೇಮವನ್ನು ಪ್ರಶ್ನಿಸುವ ಅವಿವೇಕದ ಕೆಲಸವನ್ನು ನಾವು ಸರ್ವಥಾ ಮಾಡಬಾರದು. ತಮ್ಮ ಪ್ರೀತಿಪಾತ್ರರೆಲ್ಲರನ್ನೂ ಬಿಟ್ಟು, ಬೇರೆ ನೌಕರಿ ಮಾಡುವ ಅನೇಕ ಸಾಧ್ಯತೆಗಳಿದ್ದೂ ತಮ್ಮ ಜೀವವನ್ನು ಒತ್ತೆಯಿಟ್ಟು ನಮ್ಮಂಥ ಸಾಮಾನ್ಯರ ರಕ್ಷಣೆಗಾಗಿ ಬಂದೂಕು ಹೆಗಲಿಗೇರಿಸಿಕೊಂಡು ಹಿಮಾಲಯದ ಕೊರೆಯುವ ಚಳಿಗಳಲ್ಲಿ, ಮರುಭೂಮಿಯ ರಣಬಿಸಿಲಿನಲ್ಲಿ, ಗುಡ್ಡಗಾಡಿನ ನೀರವ ಏಕಾಂತಗಳಲ್ಲಿ ನಿಂತುಕೊಂಡು ಈ ದೇಶವನ್ನು ಕಾಯುವ ಯೋಧರದ್ದು ಅಸೀಮ ದೇಶಪ್ರೇಮ. ಅವರ ನಿಷ್ಠೆಯ ಬಗ್ಗೆ ಅನುಮಾನದ ಮಾತುಗಳನ್ನಾಡುವವ ಸರ್ವರೀತಿಯಿಂದಲೂ ಅಯೋಗ್ಯನೇ ಸರಿ.

ಆದರೆ ಎಲ್ಲರಿಂದಲೂ ಯೋಧನಾಗಲು ಸಾಧ್ಯವಿಲ್ಲವಲ್ಲ? ಅಂಥವರು ಏನು ಮಾಡಬೇಕು?

ಸೈನಿಕರಾಗಿ ಈ ದೇಶಕ್ಕೆ ಸೇವೆ ಸಲ್ಲಿಸಲು ಸಾಧ್ಯವಾಗದವರು ಈ ದೇಶದ ಸಂವಿಧಾನದ ಆಶಯಗಳನ್ನು ಪಾಲನೆ ಮಾಡಿದರೆ ದೇಶದ ಅನೇಕ ಆಂತರಿಕ ಸಮಸ್ಯೆಗಳೇ ಇಲ್ಲವಾಗುತ್ತವೆ. ಆಗ ಶತ್ರುವಿನ ವಿರುದ್ಧ ಹೋರಾಡಲು ವಿನಿಯೋಗಿಸಬೇಕಾದ ನಮ್ಮ ಸಮಯವನ್ನು ಅಭಿವೃದ್ಧಿಯ ಕುರಿತು ವಿನಿಯೋಗಿಸಬಹುದು.

ಈ ದೇಶದ ರೈತ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಆತ ಬೇರೆ ದಾರಿ ಕಾಣದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ. ವ್ಯವಸ್ಥೆಯ ತಪ್ಪಿಗೆ ತಾನು ಶಿಕ್ಷೆ ಅನುಭವಿಸುತ್ತಿದ್ದಾನೆ. ಒಂದೇ ಒಂದು ರಚನಾತ್ಮಕ ಕೆಲಸದ ಮೂಲಕ ನಮ್ಮ ರೈತನನ್ನು, ಗ್ರಾಮಭಾರತವನ್ನು ಉಳಿಸಿಕೊಡಿ. ಅಅದು ಕೂಡ ದೇಶಪ್ರೇಮವೇ ಅಂತ ಇಂದಿನ ಯುವಕರಿಗೆ ಹೇಳುವ ಒಬ್ಬನೇ ಒಬ್ಬ ನಾಯಕ ನಮಗೆ ಕಾಣಿಸುತ್ತಿಲ್ಲ.

ಈ ದೇಶದ ಜಲ, ಪರಿಸರ, ಪ್ರಾಣಿ ಸಂಪತ್ತು ಅಪಾಯದಲ್ಲಿದೆ. ಎಸ್‌ಇಝೆಡ್‌ಗಳು, ಬೃಹತ್ ಕೈಗಾರಿಕೆಗಳು, ಬೃಹತ್ ಜಲವಿದ್ಯುತ್ ಸ್ಥಾವರಗಳು ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ಈ ದೇಶದ ಅಪಾರ ಪ್ರಮಾಣದ ಪರಿಸರ ನಾಶವಾಗುತ್ತಿದೆ. ಅವುಗಳ ಉಳಿವಿಗೆ ಈಗಾಗಲೇ ಜನಾಂದೋಲನಗಳು ಆರಂಭವಾಗಿವೆ. ಅವುಗಳಿಗೆ ಬೆಂಬಲ ನೀಡಿ, ಈ ದೇಶದ ಬಡವನ ಬದುಕುವ ಹಕ್ಕನ್ನು ಉಳಿಸಿಕೊಡಿ ಎಂದು ಕರೆ ನೀಡುವುದೂ ದೇಶಪ್ರೇಮವೇ ಎಂಬ ತಿಳಿವಳಿಕೆಯನ್ನು ಇಂದಿನವರಿಗೆ ನೀಡುವವರು ಯಾರು?

ರಾಜಕಾರಣವೆಂಬುದು ಕೇವಲ ಉಳ್ಳವರ ಪಾಲಿನ ದಂಧೆಯಾಗಿದೆ. ಅಂಥವರಿಂದ ದೇಶದ ಪ್ರಜಾಪ್ರಭುತ್ವ ಮಾರಾಟದ ಸರಕಾಗಿದೆ. ಮನೆಯಿಂದ ಹೊರಬನ್ನಿ, ಮತ ನೀಡಿ, ಯೋಗ್ಯರನ್ನೇ ಆರಿಸಿ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಿ. ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿದರೆ ಮಾತ್ರ ನಾವೆಲ್ಲ ನೆಮ್ಮದಿಯಿಂದ ಉಸಿರಾಡಿಕೊಂಡಿರಲು ಸಾಧ್ಯ. ಪ್ರಜಾಪ್ರಭುತ್ವವನ್ನು ಉಳಿಸುವುದೂ ದೇಶಪ್ರೇಮವೇ ಎಂದು ಹೇಳುವವರು ಯಾರಾದರೂ ಇದ್ದಾರಾ?

ಇವತ್ತಿನ ಯುವಕರಲ್ಲಿ ದೇಶಪ್ರೇಮ ಕಡಿಮೆಯಾಗುತ್ತಿದೆ ಎಂಬ ಬೊಬ್ಬೆ ಎಲ್ಲೆಡೆ ಕೇಳುತ್ತದೆ. ಸ್ವಾತಂತ್ರ್ಯೋತ್ಸವದ ಭಾಷಗಳಲ್ಲಂತೂ ಎಲ್ಲ ಹಿರಿಯರು ದೇಶಪ್ರೇಮ ಬೆಳೆಸಿಕೊಳ್ಳಲು ಯುವಕರಿಗೆ ಕರೆ ಕೊಡುತ್ತಾರೆ. ಆದರೆ ದೇಶಪ್ರೇಮ ಅಂದರೆ ಏನು, ಅದನ್ನು ವ್ಯಕ್ತಪಡಿಸುವುದು ಹೇಗೆ ಎಂಬ ಬಗ್ಗೆ ಮಾತನ್ನೇ ಆಡುವುದಿಲ್ಲ. ಹಾಗಾಗಿಯೇ ಇವತ್ತಿನ ಯುವಕರಲ್ಲಿ - ದೊಡ್ಡವರ ದೃಷ್ಟಿಯ - ದೇಶಪ್ರೇಮ ಇಲ್ಲ. ಅಂಥ ಯುವಕರಲ್ಲಿ ಈ ದೇಶದ ನೆಲ, ಜಲ, ಭಾಷೆ, ಸಂಸ್ಕೃತಿ, ರೈತನ ಬದುಕು, ಗ್ರಾಮ ಭಾರತ... ಇಂಥವುಗಳ ಉಳಿವಿಗಾಗಿ ಕೆಲಸಮಾಡುವುದೂ ದೇಶಭಕ್ತಿಯ ಪ್ರಕಟೀಕರಣಕ್ಕೆ ಇರುವ ಮಾರ್ಗಗಳೇ ಎನ್ನುವ ಅರಿವು ಬರಲೇಬೇಕು. ಆಗ ಮಾತ್ರ ಈ ದೇಶದ ಗ್ರಾಮಗಳು, ಸಂಸ್ಕೃತಿ, ಭಾಷೆ, ಜಲ ಉಳಿದೀತು.

ಯೋಧರು ತಮ್ಮ ದೇಶಪ್ರೇಮದ ಅಭಿವ್ಯಕ್ತಿಗಾಗಿ ದೇಶದ ಬೇಲಿ ಕಾಯ್ದರೆ, ಯೋಧರಾಗಲು ಸಾಧ್ಯವಿಲ್ಲದವರು ದೇಶದೊಳಗಣ ಶತ್ರುವಿನ ವಿರುದ್ಧ ತೊಡೆ ತಟ್ಟಬೇಕು. ಆಗ ಮಾತ್ರ ಭಾರತ ಭಾರತವಾಗಿಯೇ ಉಳಿಯಬಲ್ಲದು.

ವಿಜಯ್ ಜೋಶಿ

Tuesday, December 08, 2009

ಅಸೀಮಾ ಮಾಸಪತ್ರಿಕೆಯ ಸಂಪಾದಕ ಸಂತೋಷ್ ತಮ್ಮಯ್ಯ ಜೊತೆ...

ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಡಾ ಸೋಂದಾ ನಾರಾಯಣ ಭಟ್ಟರ ಸಂಪಾದಕತ್ವದಲ್ಲಿ ಆರಂಭಗೊಂಡ ಮಾಸಪತ್ರಿಕೆ ಅಸೀಮಾ. ವೈಚಾರಿಕ, ರಾಷ್ಟ್ರೀಯ ಮಹತ್ವದ ವಿಚಾರಗಳ ಬಗ್ಗೆ ಪ್ರತಿ ತಿಂಗಳವೂ ಸಂವಾದ ನಡೆಸುವ ಉದ್ದೇಶದೊಂದಿಗೆ ಮಂಗಳೂರಿನ ಜ್ಞಾನಭಾರತಿ ಪ್ರಕಾಶನದ ವತಿಯಿಂದ ಅಸೀಮಾ ಪ್ರಕಟಣೆ ಆರಂಭಿಸಿತು. ಆಗ ಸುರತ್ಕಲ್‌ನ ಗೋವಿಂದದಾಸ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕರಾಗಿದ್ದ ಡಾ. ನಾರಾಯಣ ಭಟ್ಟರು ಅಸೀಮಾ ಪತ್ರಿಕೆಗೊಂದು ನಿರ್ದಿಷ್ಟ ವೈಚಾರಿಕ ಚೌಕಟ್ಟನ್ನು ನೀಡಿದರು. ಪತ್ರಿಕೆಗೊಂದು ಭದ್ರ ಅಡಿಪಾಯವನ್ನು ಹಾಕಿದರು. ಅಸೀಮಾ ಪತ್ರಿಕೆಯ ಪ್ರಸಾರ ನಾಡಿನ ಜನಪ್ರಿಯ ಮಾಸಿಕಗಳಷ್ಟು ಇಲ್ಲದಿರಬಹುದು. ಆದರೆ ಅದರ ಹೂರಣ ಯಾವ ಭಾಷೆಯ ಪತ್ರಿಕಗಳಿಗೂ ಸಾಟಿಯಾಗುವಂತಿದೆ. ಅಂಥದ್ದೊಂದು ಅಡಿಪಾಯವನ್ನು ಹಾಕಿಕೊಟ್ಟವರು ಡಾ. ಸೋಂದಾ ನಾರಾಯಣ ಭಟ್ಟರು.

ಅನಂತರ ಡಾ. ನಾರಾಯಣ ಭಟ್ಟರ ಅಕಾಲಿಕ ನಿಧನದಿಂದ ಉಂಟಾದ ಶೂನ್ಯವನ್ನು ತುಂಬಿದ್ದು ನಾರಾಯಣ ಶೇವಿರೆಯವರು. ಅವರು ಅನ್ಯ ಕಾರ್ಯ ನಿಮಿತ್ತ ಬೆಂಗಳೂರಿಗೆ ತಮ್ಮ ವಾಸ್ತವ್ಯವನ್ನು ಬದಲಾಯಿಸುವುದರೊಂದಿಗೆ ಅಸೀಮಾದ ಸಂಪಾದನೆಯ ಜವಾಬ್ದಾರಿ ಆಗಿನ್ನೂ ತೀರಾ ಎಳೆಯ ಪ್ರಾಯದ ಸಂತೋಷ್ ತಮ್ಮಯ್ಯ ಅವರ ಮೇಲೆ ಬಿತ್ತು. ಈಗ ಸುಮಾರು ಮೂರು ವರ್ಷಗಳಿಂದ ಸ್ವತಂತ್ರವಾಗಿ ಅಸೀಮಾದ ಸಂಪಾಕತ್ವದ ಜವಾಬ್ದಾರಿಯನ್ನು ವಹಿಸಿಕೊಂಡು ಬಂದಿರುವ ಸಂತೋಷ್ ತಮ್ಮಯ್ಯ ಅವರೊಂದಿಗೆ ಸಣ್ಣ ಮಾತುಕತೆ:

ಪ್ರಶ್ನೆ: ಸರ್, ನೀವು ಪತ್ರಿಕಾರಂಗಕ್ಕೆ ಬಂದ ದಾರಿ ಯಾವುದು? ಪತ್ರಿಕೆಗಳಲ್ಲಿ ಕೆಲಸ ಮಾಡಬೇಕು ಅಂತ ಮೊದಲೇ ಯೋಚಿಸಿದ್ದಿರಾ?

ತಮ್ಮಯ್ಯ: ದೇವರಾಣೆಗೂ ಇಲ್ಲ. ನಮ್ಮೂರು ಪೊನ್ನಂಪೇಟೆ. ನಾನು ಆಗಾಗ ಮಡಿಕೇರಿಯಲ್ಲಿರುವ ನನ್ನ ಚಿಕ್ಕಮ್ಮನ ಮನೆಗೆ ಬರುತ್ತಿದ್ದೆ, ಪುಸ್ತಕ ಓದಲೆಂದು. ಅವರ ಮನೆಯಲ್ಲಿ ಒಳ್ಳೆಯ ಪುಸ್ತಕಗಳ ಸಂಗ್ರಹ ಇದೆ. ಹಾಗೆ ಒಮ್ಮೆ ಅಲ್ಲಿಗೆ ಬಂದಾಗ ಚಿಕವೀರ ರಾಜೇಂದ್ರ ಪುಸ್ತಕ ಓದುತ್ತ ಕುಳಿತಿದ್ದೆ.

ಅದೇ ದಿನ ಆಗ ಅಸೀಮಾದ ಸಂಪಾದಕರಾಗಿದ್ದ ನಾರಾಯಣ ಶೇವಿರೆಯವರು ಬಂದರು. ಪುಸ್ತಕ ಓದುತ್ತಿದ್ದ ನನ್ನನ್ನು ಅವರೇ ಮಾತನಾಡಿಸಿದರು. ಒಂದೆರಡು ಪ್ರಶ್ನೆಗಳನ್ನು ಕೇಳಿದರು. ಹಾಗೆಯೇ ಅಸೀಮಾ ಪತ್ರಿಕೆಗೆ ಕೆಲಸ ಮಾಡುತ್ತೀಯಾ ಅಂತ ಕೇಳಿದರು. ನನಗೇನೂ ಆಗ ಅಷ್ಟೊಂದು ಮನಸ್ಸಿರಲಿಲ್ಲ. ಆದರೂ ಒಲ್ಲದ ಮನಸ್ಸಿನಿಂದ ಹೂಂ ಅಂದಿದ್ದೆ.

ಅದಾಗಿ ಸುಮಾರು ಒಂದು ವರ್ಷದ ನಂತರ ನನಗೆ ಮನೆ ಬಿಟ್ಟು ಹೊರಗಡೆ ಹೋಗಿ ಏನಾದರೂ ಕೆಲಸ ಮಾಡಬೇಕು ಅಂತ ಅನ್ನಿಸಿತು. ಆಗ ನೇರವಾಗಿ ನಾರಾಯಣ ಶೇವಿರೆಯವರಿಗೆ ಕರೆ ಮಾಡಿ ಅಸೀಮಾದಲ್ಲಿ ಕೆಲಸ ಮಾಡವು ಇಚ್ಛೆ ವ್ಯಕ್ತಪಡಿಸಿದೆ. ಇನ್ನೇನು, ಮಂಗಳೂರಿಗೆ ಬಂದದ್ದಾಯಿತು. ಅಸೀಮಾದಲ್ಲಿ ವೃತ್ತಿಜೀವನ ಆರಂಭಿಸಿದ್ದಾಯಿತು.

ಪ್ರಶ್ನೆ: ಹಾಗಾದರೆ ಆರಂಭದಲ್ಲೇ ನೀವು ಸಂಪಾದಕರಾಗಿ ಕೆಲಸ ಆರಂಭಿಸಿದಿರಾ?

ತಮ್ಮಯ್ಯ: ಇಲ್ಲ, ಖಂಡಿತ ಇಲ್ಲ. ಆರಂಭದ ಎರಡು ವರ್ಷಗಳ ಕಾಲ ನಾನು ಸಹಾಯಕ ಸಂಪಾದಕನಾಗಿ ಕೆಲಸ ಮಾಡುತ್ತಿದ್ದೆ. ನಾರಾಯಣ ಶೇವಿರೆಯವರೇ ಆಗ ಸಂಪಾದಕರಾಗಿದ್ದರು. ಅವರು ಬೆಂಗಳೂರಿಗೆ ತಮ್ಮ ವಾಸ್ತವ್ಯವನ್ನು ಬದಲಾಯಿಸಿದ ನಂತರ ನಾನು ಅಸೀಮಾದ ಸಂಪಾದಕತ್ವವನ್ನು ವಹಿಸಿಕೊಂಡೆ.

ಪ್ರಶ್ನೆ: ಹೇಗನಿಸುತ್ತಿದೆ ಸಂಪಾದಕನ ಜವಾಬ್ದಾರಿ?

ತಮ್ಮಯ್ಯ: ತುಂಬ ಶ್ರಮವನ್ನು ಕೇಳುವ ಕೆಲಸ ಇದು. ಇಷ್ಟೊಂದು ಸವಾಲಿನ ಕೆಲಸ ಇದು ಅಂತ ಖಂಡಿತ ಗೊತ್ತಿರಲಿಲ್ಲ. ಪ್ರತಿ ತಿಂಗಳೂ ಹೊಸ ವಿಚಾರವೊಂದನ್ನು ಹುಡುಕಬೇಕು. ಅದು ರಾಷ್ಟ್ರೀಯ ಮಹತ್ವದ್ದೇ ಆಗಿರಬೇಕು. ಅದಲ್ಲದೆ ನಮ್ಮ ತಿಂಗಳ ಇಡೀ ಸಂಚಿಕೆ ಒಂದೇ ವಿಷಯವನ್ನು ಕೇಂದ್ರೀಕರಿಸಿ ಮಾಡಬೇಕಾದ್ದರಿಂದ ಆ ವಿಚಾರದ ಬಗ್ಗೆ ಆಳವಾದ ಚಿಂತನೆಯುಳ್ಳ ಬರಹಗಾರರನ್ನು ಸಂಪರ್ಕಿಸಬೇಕು. ವಿಷಯದ ಬಗ್ಗೆ ಅವರಿಗೆ ಮನವರಿಕೆ ಮಾಡಿಸಿ ಅವರನ್ನು ಬರೆಯುವಂತೆ ಮಾಡಬೇಕು. ಅವರೆಲ್ಲರ ಬರಹ ಸಮಯಕ್ಕೆ ಸರಿಯಾಗಿ ಸಿಗುವಂತೆ ನೋಡಿಕೊಳ್ಳಬೇಕು. ಊಫ್, ಸುಸ್ತಾಗಿ ಬಿಟ್ಟಿರುತ್ತದೆ.

ಹಾಗಂತ ಕೆಲಸವನ್ನು ನಾನು ಆನಂದಿಸುತ್ತಿಲ್ಲ ಅಂತಲ್ಲ. ಆದರೆ ಹೆಚ್ಚಿನೆಲ್ಲ ಕೆಲಸವನ್ನು ನಾನೇ ನೋಡಿಕೊಳ್ಳುತ್ತೇನಾದ್ದರಿಂದ ಸುಸ್ತಾಗಿಬಿಡುತ್ತೇನೆ!

ಪ್ರಶ್ನೆ: ನಿಮ್ಮ ಮಾತೃಸಂಸ್ಥೆಯಾದ ಹೊಸದಿಗಂತ ಬದಲಾಗಿದೆ. ನಿಮ್ಮ ಪತ್ರಿಕೆಯನ್ನು ಬದಲಾವಣೆಗೆ ಒಡ್ಡುವ ಯಾವುದಾದರೂ ಆಲೋಚನೆ ಇದೆಯಾ?

ತಮ್ಮಯ್ಯ: ಖಂಡಿತ. ಅದೂ ಬೇಗನೇ ಆಗುತ್ತದೆ. ನಮ್ಮ ಪತ್ರಿಕೆಯ ಆಕಾರ ಚಿಕ್ಕದಾಗಿರುವುದರಿಂದ ಪುಟವಿನ್ಯಾಸದಲ್ಲಿ ಮಹತ್ತರ ಬದಲಾವಣೆ ಮಾಡುವುದು ಕಷ್ಟ. ಆದರೆ ಇರುವ ಅವಕಾಶವನ್ನೇ ಉಪಯೋಗಿಸಿಕೊಂಡು ಏನಾದರೂ ಬದಲಾವಣೆ ಮಾಡಬೇಕಿದೆ.

ಪ್ರಶ್ನೆ: ಬದಲಾವಣೆ ಪುಟವಿನ್ಯಾಸದಲ್ಲಿ ಮಾತ್ರವಾ? ಅಥವಾ ಹೂರಣದಲ್ಲಿಯೂ ಏನಾದರೂ ಹೊಸತನ ಬರಲಿಕ್ಕಿದೆಯಾ?

ತಮ್ಮಯ್ಯ: ಕೇವಲ ಪುಟವಿನ್ಯಾಸದಲ್ಲಿ ಬದಲಾವಣೆ ತಂದರೆ ಹೆಚ್ಚಿನ ಪ್ರಯೋಜನ ಆಗಲಿಕ್ಕಿಲ್ಲ. ಹೂರಣದಲ್ಲಿಯೂ ಒಂದಿಷ್ಟು ಬದಲಾವಣೆ ಕಾದಿದೆ. ಮಾಧ್ಯಮದ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗ್ರಹಿಸಬಲ್ಲ ಉತ್ತಮ ಲೇಖಕರೊಬ್ಬರಿಂದ ಮಾಧ್ಯಮ ವಿಮರ್ಶೆ ಅಂಕಣ ಬರೆಸಬೇಕೆಂಬ ಆಲೋಚನೆ ಇದೆ.

ಪ್ರಶ್ನೆ: ಅಸೀಮಾದ ಸಂಪಾದಕತ್ವದ ಜವಾಬ್ದಾರಿ ಬಿಟ್ಟು ಬೇರೆ ಯಾವುದಾದರೂ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದೀರಾ?

ತಮ್ಮಯ್ಯ: ಹೌದು. ಹೊಸದಿಗಂತದ ವಿನ್ಯಾಸ, ಹೂರಣ ಬದಲಾಗುವುದರೊಂದಿಗೆ ಅಲ್ಲಿ ಅನೇಕ ಹೊಸ ಸಾಧ್ಯತೆಗಳು ತೆರೆದುಕೊಂಡಿವೆ. ಹೊಸದಿಗಂತದಲ್ಲಿ ಈಗ ’ಹಾದು ಹೋಗುವ ಹಾಳೆಗಳು’ ಅಂತ ಒಂದು ಅಂಕಣ ಬರೆಯಲು ಆರಂಭಿಸಿದ್ದೇನೆ. ರಾಜಕೀಯೇತರ ವಿಚಾರಗಳನ್ನು ಇಟ್ಟುಕೊಂಡು ಬರೆಯಬೇಕೆಂಬ ಆಲೋಚನೆ ಇದೆ. ಬೇಂದ್ರೆ, ಕುವೆಂಪು, ಅಡಿಗ... ಹೀಗೆ ಶುದ್ಧ ಸಾಹಿತ್ಯದ ಬರಹಗಳಿಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಎಲ್ಲಾದರೂ ಒಮ್ಮೆ ಮಾತ್ರ ರಾಜಕೀಯ ವಿಚಾರಗಳ ಬಗ್ಗೆ ಗಮನ. ಉಳಿದಂತೆ ಹೆಚ್ಚಾಗಿ ರಾಜಕೀಯೇತರ ವಿಚಾರಕ್ಕೇ ಆದ್ಯತೆ.

ಪ್ರಶ್ನೆ: ಇತ್ತೀಚಿನ ದಿನಗಳಲ್ಲಿ ನಾಡಿನಾದ್ಯಂತ ಪತ್ರಿಕೋದ್ಯಮ ಕೋರ್ಸುಗಳು ಆರಂಭವಾಗುತ್ತಿವೆ. ನೂರಾರು ಮಂದಿ ವಿದ್ಯಾರ್ಥಿಗಳೂ ಪ್ರತಿವರ್ಷ ಪದವಿ ಪಡೆಯುತ್ತಿದ್ದಾರೆ. ಅವರ ಬಗ್ಗೆ ಎರಡು ಮಾತು...?

ತಮ್ಮಯ್ಯ: ಹಾಂ... ತುಂಬ ಮಂದಿ ಯುವಕರು ಈಗ ಆಸೆಪಟ್ಟು ಪತ್ರಿಕೋದ್ಯಮ ಓದುತ್ತಿದ್ದಾರೆ. ಪತ್ರಿಕೋದ್ಯಮ ತುಂಬ ಆಸಕ್ತಿಕರ ಕ್ಷೇತ್ರ. ಬಹಳ ಮಂದಿ ಆಸಕ್ತರು ಈ ಕ್ಷೇತ್ರಕ್ಕೆ ಬರುತ್ತಿರುವುದು ಒಳ್ಳೆಯ ಬೆಳವಣಿಗೆ. ಅವರ ಆಸಕ್ತಿ, ಉತ್ಸಾಹ ತುಂಬ ಖುಷಿಕೊಡುವಂಥದ್ದು.

ಆದರೆ ಅವರ ಬಗ್ಗೆ ಒಂದು ಮಾತು ಹೇಳಬೇಕು ಅಂತ ಅನಿಸುತ್ತಿದೆ. ಪತ್ರಿಕೋದ್ಯಮ ವಿದ್ಯಾರ್ಥಿಗಳು ಕೇವಲ ತಮ್ಮ ಪಠ್ಯದ ವಿಚಾರ ಮಾತ್ರ ಓದಿದರೆ ಸಾಲದು. ಅವರು ಇತರ ವಿಚಾರಗಳ ಬಗ್ಗೆ ಓದಿರಲೇಬೇಕು. ಅಡಿಗ, ಕುವೆಂಪು, ತೇಜಸ್ವಿ, ಭೈರಪ್ಪ ಗೊತ್ತಿರಬೇಕು. ಇತಿಹಾಸ, ರಾಜಕೀಯ ತಿಳಿದಿರಬೇಕು. ಒಂದು ವಿಚಾರ ನೆನಪಿಡಿ: ಪತ್ರಿಕಾಕ್ಷೇತ್ರಕ್ಕೆ ಬಂದ ನಂತರ ವಿದ್ಯಾರ್ಥಿಗಳು ಪತ್ರಿಕೋದ್ಯಮದ ಬಗ್ಗೆಯೇ ಬರೆಯುತ್ತಿರಲು ಸಾಧ್ಯವಿಲ್ಲ. ಅವರು ಸಾಮಾಜಿಕ ವಿಚಾರಗಳ ಬಗ್ಗೆ ಬರೆಯಬೇಕು. ಆದರೆ ಅಂತಹ ವಿದ್ಯಾರ್ಥಿಗಳು ಪತ್ರಿಕೋದ್ಯಮವನ್ನು ಅಕಾಡೆಮಿಕ್ ಆಗಿ ಕಲಿಸುವ ಕಾಲೇಜುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರಾ?

***

ಮಾತನಾಡಲು ಇನ್ನೂ ಸಾಕಷ್ಟು ವಿಚಾರವಿತ್ತು. ಅದಲ್ಲದೆ, ಮಾತುಕತೆ ಚೇತೋಹಾರಿಯಾಗಿರಲೆಂದು ತಮ್ಮಯ್ಯ ಕೊಡಿಸಿದ ಕಾಫಿ ಇನ್ನೂ ಹಬೆಯಾಡುತ್ತಲೇ ಇತ್ತು. ಆದರೆ ನನಗೆ ಮಂಗಳೂರು ಬಿಡುವ ಸಮಯ ಆಗಿದ್ದರಿಂದ ಒಲ್ಲದ ಮನಸ್ಸಿನಿಂದಲೇ ಮಾತುಕತೆಗೆ ಒಂದು ಅಲ್ಪವಿರಾಮ ಹಾಕಿದೆ - ಇನ್ನೊಮ್ಮೆ ಮತ್ತೆ ಭೇಟಿಯಾಗಿ ಮಾತಾಡುವ ಹಂಬಲದೊಂದಿಗೆ.

ವಿಜಯ್ ಜೋಶಿ

Tuesday, December 01, 2009

ಪತ್ರಿಕೋದ್ಯಮವೆಂಬ ಸಮಾಜದ ಸಾಕ್ಷಿಪ್ರಜ್ಞೆ

ದಿ ಏಶಿಯನ್ ಏಜ್ ಮತ್ತು ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗಳಲ್ಲಿ ಕೆಲಸ ಮಾಡಿ ಅನುಭವ ಇರುವ ಮಂಗಳೂರು ಮೂಲದ ಪತ್ರಕರ್ತ ಶ್ರೀನಿವಾಸನ್ ನಂದಗೋಪಾಲ್ ಈಗ ವೃತ್ತಿಪರ ಪತ್ರಿಕೋದ್ಯಮಕ್ಕೆ ವಿದಾಯ ಹೇಳಿ ಹವ್ಯಾಸಿ ಪತ್ರಕರ್ತರಾಗಿದ್ದಾರೆ. ಸೆಂಟರ್ ಫಾರ್ ಇಂಟಿಗ್ರೇಟೆಡ್ ಲರ್ನಿಂಗ್ ಎಂಬ ಸಂಘಟನೆಯೊಂದನ್ನು ಹುಟ್ಟುಹಾಕಿಕೊಂಡು ಪರ್ಯಾಯ ಶಿಕ್ಷಣ ವಿಧಾನಗಳ ಅಭಿವೃದ್ಧಿಯ ಬಗ್ಗೆಯೂ ಕೆಲಸ ಮಾಡುತ್ತಿದ್ದಾರೆ. ಇವೆರಡರ ಜೊತೆಗೆ ಆಗಾಗ ಕರಾವಳಿಯ ಪತ್ರಿಕೋದ್ಯಮ ಕಾಲೇಜುಗಳ ವಿದ್ಯಾರ್ಥಿಗಳಿಗೆಂದು ಪ್ರಾಯೋಗಿಕ ಪತ್ರಿಕೋದ್ಯಮ ತರಗತಿಗಳನ್ನೂ ನಡೆಸುತ್ತಿದ್ದಾರೆ.

ಒಮ್ಮೆ ಹೀಗೆ ಅವರ ತರಗತಿಯಲ್ಲಿ ಕುಳಿತಿದ್ದಾಗ ಅವರ ಒಂದು ಮಾತು ಥಟ್ಟನೆ ಮನಸ್ಸಿನ ಆಳಕ್ಕೆ ಇಳಿಯಿತು. ಪತ್ರಕರ್ತನಾದವ ಆಶಾವಾದಿಯೂ ಆಗಬೇಕಿಲ್ಲ, ನಿರಾಶಾವಾದಿಯೂ ಆಗಬೇಕಿಲ್ಲ. ಆತ ವಾಸ್ತವವಾದಿಯಾಗಿದ್ದರೆ ಸಾಕು. ಆತ ತನ್ನ ವಯುಕ್ತಿಕ ಬದುಕಿನಲ್ಲಿ ಆಶಾವಾದಿಯಾಗಿರಬಾರದು ಎಂದು ಹೇಳುತ್ತಿಲ್ಲ. ಆದರೆ ಪತ್ರಕರ್ತನ ಕೆಲಸ ನಿರ್ವಹಿಸುತ್ತಿರುವಾಗ ಆತ ಖಂಡಿತವಾಗಿಯೂ ವಾಸ್ತವವಾದಿಯಾಗಿರಬೇಕು. ಪತ್ರಿಕೋದ್ಯಮವನ್ನು ಮತ್ತು ವೈಯುಕ್ತಿಕ ಬದುಕನ್ನು ಒಂದೇ ಎಂದು ತಿಳಿದವರು ವಾಸ್ತವವಾದಿಗಳೇ ಆಗಿರಲಿ. ಅಂಥವರು ಆಶಾವದಿಗಳೋ ಅಥವಾ ನಿರಾಶಾವಾದಿಗಳೋ ಆಗಿರುವುದು ಬೇಡ ಎಂಬುದು ಅವರ ಆ ದಿನದ ಪಾಠದ ಸಾರ.

ಅವರ ಮಾತು ಸರಿಯಾಗಿ ಅರ್ಥವಾಗಬೇಕಾದರೆ ಒಂದು ಕಾಲ್ಪನಿಕ ಕಥೆಯನ್ನು ಹೇಳಬೇಕು. ಈ ಕಥೆಯನ್ನು ನನಗೆ ಹೇಳಿದ್ದು ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಅಧ್ಯಾಪಕರಾಗಿರುವ ಆದಿತ್ಯ ಭಟ್ಟರು.

ಒಮ್ಮೆ ಹೀಗಾಯಿತು. ಒಬ್ಬ ಮಧ್ಯಮ ವರ್ಗದ ಮೇಲ್ಜಾತಿಯ ಯುವಕ ಬಡ ಕೆಳಜಾತಿಯ ಯುವತಿಯೊಬ್ಬಳಿಗೆ ಒಂದು ಸಾವಿರ ರೂಪಾಯಿ ಸಾಲ ನೀಡಿದ್ದ. ಆ ಯುವತಿ ಸಕಾಲದಲ್ಲಿ ಆ ಸಾಲವನ್ನು ಹಿಂದಿರುಗಿಸುವುದಾಗಿ ಸಾಲ ಪಡೆಯುವ ಸಮಯದಲ್ಲಿ ಮಾತು ಕೊಟ್ಟಿದ್ದಳು.

ಆದರೆ ಸಾಲ ತೀರಿಸಬೇಕಾದ ಅವಧಿ ಮುಗಿದು ಹಲವು ದಿನಗಳು ಕಳೆದರೂ ಆ ಯುವತಿ ಸಾಲವನ್ನು ಮರುಪಾವತಿ ಮಾಡಲಿಲ್ಲ. ಇತ್ತ ಯುವಕ ಸಹನೆಯಿಂದ ಹಲವು ಬಾರಿ ಸಾಲ ಮರುಪಾವತಿಸುವಂತೆ ಯುವತಿಗೆ ತಿಳಿಹೇಳಿದ. ಆದರೆ ಯುವತಿ ಇವನ ಮಾತಿಗೆ ಉಡಾಫೆ ತೋರಿಸುತ್ತಾ ಸಾಲವನ್ನು ಮರುಪಾವತಿ ಮಾಡಲೇ ಇಲ್ಲ. ಕೊನೆಗೊಂದು ದಿನ ರೋಸಿಹೋದ ಆ ಯುವಕ ನಡುಬೀದಿಯಲ್ಲಿ ಯುವತಿಯ ಕಪಾಳಕ್ಕೊಂದು ಬಾರಿಸಿದ. ನಡೆದ ಕಥೆ ಇಷ್ಟೆ.

ನಂತರ ಅಲ್ಲಿಗೆ ಅನೇಕ ಮಂದಿ ಪತ್ರಕರ್ತರು ಬಂದರು, ಘಟನೆಯ ವರದಿ ಮಾಡುವುದಕ್ಕೆ. ಅವರಲ್ಲಿ ಒಬ್ಬ ಕಮ್ಯುನಿಸ್ಟ್ ಪತ್ರಕರ್ತ, ಇನ್ನೊಬ್ಬ ’ಸೆಕ್ಯುಲರ್’ ಪತ್ರಕರ್ತ, ಮತ್ತೊಬ್ಬ ಸ್ತ್ರೀವಾದಿ, ಮಗದೊಬ್ಬ ವಾಸ್ತವವಾದಿ ಪತ್ರಕರ್ತ ಇದ್ದ, ನಾಲ್ವರೂ ಪತ್ರಕರ್ತರು ತಮ್ಮ ತಮ್ಮ ಪತ್ರಿಕೆಗಳಿಗೆ ವರದಿ ಬರೆದು ಕಳಿಸಿದರು. ಕಮ್ಯುನಿಸ್ಟ್ ಪತ್ರಕರ್ತ ಮೇಲ್ವರ್ಗದವರಿಂದ ಕೆಳವರ್ಗದವರ ಮೇಲೆ ನಿಲ್ಲದ ದೌರ್ಜನ್ಯ ಎಂಬ ಅರ್ಥದಲ್ಲಿ ವರದಿ ಬರೆದರೆ ಸೆಕ್ಯುಲರ್ ಪತ್ರಕರ್ತ ಈ ದೇಶದಲ್ಲಿ ಜಾತಿಬೇಧಗಳು ಅಳಿಸಿಹೋಗುವವರೆಗೆ ಈ ರೀತಿಯ ದೌರ್ಜನ್ಯಗಳು ನಿಲ್ಲುವುದಿಲ್ಲ ಎಂದು ಬರೆದ. ಸ್ತ್ರೀವಾದಿ ಪತ್ರಕರ್ತ ಸಮಾಜದಲ್ಲಿ ಸ್ತ್ರೀ ಶೋಷಣೆಗೆ ಲಗಾಮು ಹಾಕುವವರು ಯಾರು ಎಂಬ ಅರ್ಥದ ವರದಿ ಕಳಿಸಿದ. ಕೊನೆಯವನಾದ ವಾಸ್ತವಾದಿ ಪತ್ರಕರ್ತ ಮಾತ್ರ ಸಾಲ ಪಡೆದು ವಂಚಿಸಿದ ಯುವತಿಗೆ ಕಪಾಳಮೋಕ್ಷ ಎಂದು ವರದಿ ಕಳಿಸಿದ. ಎಲ್ಲರ ವರದಿಗಳೂ ಪ್ರಕಟವಾದವು.

ವಿಭಿನ್ನ ಸೈದ್ಧಾಂತಿಕ ನೆಲೆಯಿಂದ ಬಂದಿರುವ ಪತ್ರಕರ್ತರು ವರದಿ ಮಾಡಿರುವ ರೀತಿಯನ್ನು ಒಮ್ಮೆ ಗಮನಿಸಿ. ಪತ್ರಿಕಾಧರ್ಮವಾದ ವಾಸ್ತವವನ್ನು ಗ್ರಹಿಸಿ ವರದಿ ಮಾಡುವುದಕ್ಕಿಂತ ಹೆಚ್ಚಾಗಿ ಸಿದ್ಧಾಂತಗಳೇ ತಲೆಯಲ್ಲಿ ತುಂಬಿಕೊಂಡಾಗ ಆಗುವ ಅಚಾತುರ್ಯಗಳು ಏನು ಎಂಬುದನ್ನೂ ನೋಡಿ.

ಇಲ್ಲಿ ಒಬ್ಬ ಯುವಕ ಒಬ್ಬಳು ಯುವತಿಗೆ ವಿಶ್ವಾಸದಿಂದ ಸಾಲ ಕೊಟ್ಟಿದ್ದ. ಆದರೆ ಆಕೆ ಆ ವಿಶ್ವಾಸವನ್ನು ಉಳಿಸಿಕೊಳ್ಳಲಿಲ್ಲ. ಬದಲಿಗೆ ಯುವಕನನ್ನು ಸತಾಯಿಸತೊಡಗಿದಳು. ಗರಿಷ್ಠ ಸಹನೆಯನ್ನು ತೋರಿದ ಯುವಕ ಕೊನೆಗೊಂದು ದಿನ ರೋಸಿ ಹೋಗಿ ಆಕೆಯ ಕಪಾಳಕ್ಕೆ ಬಾರಿಸಿದ. ಘಟನೆ ಇಷ್ಟೆ. ಇಲ್ಲಿ ಆ ಇಬ್ಬರು ವ್ಯಕ್ತಿಗಳ ಜಾತಿ, ವರ್ಗ, ಲಿಂಗ ಇವ್ಯಾವುದೂ ಮಹತ್ವದ್ದಲ್ಲ. ಯುವಕ ಯುವತಿಗೆ ಹೊಡೆದದ್ದು ಕಾನೂನಿನ ದೃಷ್ಟಿಯಿಂದ ನಿಜಕ್ಕೂ ತಪ್ಪು. ಆದರೆ ಅದನ್ನು ಅರ್ಥೈಸುವಿಕೆ ಎಷ್ಟೊಂದು ರೀತಿಯಲ್ಲಾಯಿತು? ಸಾಲ ಹಿಂದಿರುಗಿಸಲು ಒಪ್ಪದ ಯುವತಿಗೆ ಒಬ್ಬ ಯುವಕ ಕಪಾಳಕ್ಕೆ ಹೊಡೆದದ್ದು - ಆ ಯುವಕ ಸಾಕಷ್ಟು ಸಹನೆಯನ್ನು ಈ ಹಿಂದೆ ತೋರಿದ್ದ ಎಂಬುದು ಮರೆತುಹೋಗಿ - ಸೈದ್ಧಾಂತಿಕ ಹಿನ್ನಲೆಯಲ್ಲಿ ಘಟನೆಗಳನ್ನು ಗ್ರಹಿಸುವ ಪತ್ರಕರ್ತರಿಂದಾಗಿ ತಪ್ಪಾಗಿ ವರದಿಯಾಯಿತು. ಪತ್ರಿಕೆಗಳಲ್ಲಿ ಬರುವ ವಿಚಾರಗಳು ನೂರಕ್ಕೆ ನೂರು ಸತ್ಯ ಎಂದು ನಂಬುವ(?) ಓದುಗ ಇಲ್ಲಿ ವಂಚನೆಗೊಳಗಾದ. ವಾಸ್ತವವನ್ನು ಗ್ರಹಿಸುವ ವ್ಯವಧಾನ ಇಲ್ಲದವ ಯಾವ ಸೀಮೆಯ ಪತ್ರಿಕೋದ್ಯಮ ಮಾಡಬಹುದು?!

ಈ ಘಟನೆ ನೂರಕ್ಕೆ ನೂರು ಕಾಲ್ಪನಿಕವೇ ಇರಬಹುದು. ಅದಲ್ಲದೆ ಸೈದ್ಧಾಂತಿಕ ಹಿನ್ನಲೆ ಹೊಂದಿರುವ ಎಲ್ಲ ಪತ್ರಕರ್ತರೂ ಇದೇ ರೀತಿ ಬರೆಯುತ್ತಾರೆ ಎಂದು ಹೇಳುತ್ತಿಲ್ಲ. ತಮ್ಮ ವೈಯುಕ್ತಿಕ ನಂಬಿಕೆ, ಸಿದ್ಧಾಂತಗಳು ಯಾವುದೇ ಆಗಿದ್ದರೂ ವರದಿಗಾರಿಕೆಗೆ ಕುಳಿತಾಗ ಕೇವಲ ವಾಸ್ತವ ಸಂಗತಿಯನ್ನು ಗ್ರಹಿಸಿ ವಸ್ತುನಿಷ್ಠವಾಗಿ ವರದಿ ಮಾಡುವ ಪತ್ರಕರ್ತರ ದೊಡ್ಡ ಸಮೂಹ ಎಲ್ಲ ಸೈದ್ಧಾಂತಿಕ ಗುಂಪುಗಳಲ್ಲಿಯೂ ಇದೆ. ಆದರೆ ಇದೇ ಹೊತ್ತಿನಲ್ಲಿ ಸರಳ ಘಟನೆಯನ್ನೂ ಸಿದ್ಧಾಂತದ ಹಿನ್ನಲೆಯಲ್ಲಿ ವಿಮರ್ಶಿಸಿ ಸತ್ಯವನ್ನೇ ಮರೆಮಾಚುವ ಪತ್ರಕರ್ತರೂ ನಮ್ಮ ನಡುವೆ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ.

ಹಾಗಾದರೆ ಪತ್ರಕರ್ತನಾದವನಿಗೆ ಸಿದ್ಧಾಂತಗಳೇ ಇರಬಾರದಾ? ಸೈದ್ಧಾಂತಿಕ ಹಿನ್ನಲೆ ಇರದೆ ಬರಹ ಎನ್ನುವುದು ಕೈಗೆ ಹತ್ತುತ್ತಾ? ಇಂಥ ಪ್ರಶ್ನೆಗಳು ಖಂಡಿತ ಮನಸ್ಸಿನಲ್ಲಿ ಮೂಡುತ್ತವೆ. ಅವಕ್ಕೆ ಸರಿಯಾದ ಉತ್ತರ ಕಂಡುಕೊಳ್ಳಬೇಕಾದ ಅಗತ್ಯವೂ ಇದೆ.

ಪತ್ರಿಕಾ ಬರಹದ ಎರಡು ಮುಖ್ಯ ವರ್ಗೀಕರಣಗಳಾದ ವರದಿಗಾರಿಕೆ ಮತ್ತು ಸಂಪಾದಕೀಯ ಬರಹಗಳ ವಿಚಾರದ ಬಗ್ಗೆ ಮಾತನಾಡುವಾಗ ಪತ್ರಕರ್ತನ ನಿಲುವುಗಳು ಪ್ರಮುಖವಾಗಿ ಚರ್ಚೆಗೆ ಬರುತ್ತವೆ.

ಈ ಬಗ್ಗೆ ಒಂದು ಸ್ವಾರಸ್ಯಕರ ಕಥೆಯಿದೆ. ಕನ್ನಡನಾಡಿನ ಹಿರಿಯ ಆಂಗ್ಲ ಭಾಷಾ ಪತ್ರಕರ್ತ ಮಾಧವ ವಿಠಲ ಕಾಮತ್ (ಅಥವಾ ಎಮ್ ವಿ ಕಾಮತ್) ಅವರು ಪತ್ರಕರ್ತರಾಗಿ ಸಕ್ರಿಯರಾಗಿದ್ದ ದಿನಗಳಲ್ಲಿ ನಡೆದ ಘಟನೆ ಇದು.

ಅದು ಕಾಮತ್‌ರು ಸ್ವಾಮಿನಾಥನ್ ಸದಾನಂದ್ ಅವರ ದಿ ಫ್ರೀ ಪ್ರೆಸ್ ಜರ್ನಲ್ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ದಿನಗಳು. ಆ ದಿನಗಳಲ್ಲಿ ಕಾಮತ್‌ರಿಗೆ ಸಮಾಜವಾದದ ಬಗ್ಗೆ ಬಹಳ ಒಲವಿತ್ತು. ಅವರು ಆ ದಿನಗಳಲ್ಲಿ ಒಬ್ಬ ಸಮಾಜವಾದಿ ಪತ್ರಕರ್ತ. ಹಾಗಿದ್ದಾಗ ಒಮ್ಮೆ ಮುಂಬಯಿಯಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ಒಂದು ಸಭೆ ಇತ್ತಂತೆ. ಆ ಸಭೆಯನ್ನು ಫ್ರೀ ಪ್ರೆಸ್ ಜರ್ನಲ್‌ನ ಪರವಾಗಿ ವರದಿ ಮಾಡುವ ಜವಾಬ್ದಾರಿ ಕಾಮತ್ ಹೆಗಲ ಮೇಲೆ ಬಿತ್ತು. ಸರಿ, ಕಾಮತ್ ಪೆನ್ನು, ಪುಸ್ತಕ ಹಿಡಿದು ಹೊರಟರು. ಸಭೆಯಲ್ಲಿ ಸಂಪೂರ್ಣವಾಗಿ ಹಾಜರಿದ್ದು ನಂತರ ಕಛೇರಿಗೆ ಮರಳಿ ಕಾರ್ಯಕ್ರಮದ ವರದಿ ಬರೆದಿಟ್ಟು ಹೋದರು ಕಾಮತರು. ಮರುದಿನದ ಸಂಚಿಕೆಯಲ್ಲಿ ಸುದ್ದಿ ಪ್ರಕಟವೂ ಆಯಿತು. ಆದರೆ ಸುದ್ದಿ ಪ್ರಕಟವಾದ ಬೆನ್ನಿಗೇ ಒಂದು ವಿವಾದವೂ ಕಾಮತ್‌ರನ್ನು ಅರಸಿಕೊಂಡು ಬಂದಿತು.

ಆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ಸಿಗರು ಮತ್ತು ಸಮಾಜವಾದಿ ಪಕ್ಷದವರಿಬ್ಬರೂ ಮಾತಾಡಿದ್ದರು. ಇಬ್ಬರ ಭಾಷಣವೂ ಪ್ರಮುಖವೇ ಆಗಿತ್ತು. ಆದರೆ ಕಾಮತ್ ಅವರು ತಮ್ಮ ವರದಿಯಲ್ಲಿ ಸಮಾಜವಾದಿಗಳ ಭಾಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರೆ. ಕಾಂಗ್ರೆಸ್ಸಿಗರ ಮಾತುಗಳ ಬಗ್ಗೆ ಸ್ವಲ್ಪ ಮಟ್ಟಿಗೆ ನಿರ್ಲಕ್ಷ್ಯ ತೋರಿಸಲಾಗಿದೆ ಎಂದು ಕಾಂಗ್ರೆಸ್ಸಿಗರ ಒಂದು ಗುಂಪು ಪತ್ರಿಕೆಯ ಸಂಪಾದಕ ಎಸ್ ಸದಾನಂದ್‌ರಲ್ಲಿ ದೂರು ನೀಡಿತು. ದೂರನ್ನು ಗಂಭೀರವಾಗಿ ಪರಿಗಣಿಸಿದ ಸದಾನಂದ್ ಕಾಮತ್‌ರನ್ನು ತಮ್ಮ ಕೋಣೆಗೆ ಕರೆಸಿ ವಿವರಣೆ ಕೇಳಿದರು.

ಕಾಮತ್‌ರು ಮೂಲತಃ ತಾವೊಬ್ಬ ಸಮಾಜವಾದಿ ವಿಚಾರದ ಬಗ್ಗೆ ಒಲವಿದ್ದವನಾಗಿದ್ದರಿಂದ ಸಮಾಜವಾದಿಗಳ ಭಾಷಣಕ್ಕೆ ಸ್ವಲ್ಪ ಹೆಚ್ಚಿನ ಆದ್ಯತೆ ನೀಡಿರಲೂಬಹುದು ಎಂದು ಹೇಳಿದರು. ಆಗ ಎಸ್ ಸದಾನಂದ್ ಸ್ವಲ್ಪ ಖಡಕ್ ಆಗಿ ಕಾಮತ್‌ರಲ್ಲಿ ಒಂದು ಮಾತು ಹೇಳಿದರು: ಕಾಮತ್, ನಿನಗೆ ಸಮಾಜವಾದ ಅಷ್ಟೊಂದು ಇಷ್ಟ ಅನ್ನುವುದಾದರೆ ಪತ್ರಕರ್ತನ ಕೆಲಸ ಬಿಟ್ಟು ಸಮಾಜವಾದಿ ಪಕ್ಷಕ್ಕೇ ಸೇರಿಕೊ. ಆಗಲ್ಲ, ಪತ್ರಕರ್ತನ ಕೆಲಸ ಬೇಕು ಎನ್ನುವುದಾದರೆ ಎಲ್ಲರನ್ನೂ ಸಮಾನವಾಗಿ ನೋಡು. ಆಯ್ಕೆ ನಿನ್ನದು. ಸದಾನಂದ್‌ರ ಕಡ್ಡಿ ಮುರಿದಂತಹ ಮಾತಿಗೆ ಕಾಮತ್ ಒಪ್ಪಲೇಬೇಕಾಯಿತು.

ನೆನಪಿಡಿ; ಇಲ್ಲಿ ಸದಾನಂದ್ ಅವರು ಕಾಮತ್‌ಗೆ ಹೇಳಿದ ಮಾತುಗಳು ವರದಿಗಾರಿಕೆಗೆ ಹೆಚ್ಚು ಅನ್ವಯವಾಗುತ್ತವೆ.

ಇನ್ನು ಸಂಪಾದಕೀಯ ಪುಟದಲ್ಲಿ ಬರುವ ಬರೆಹಗಳ ಬಗ್ಗೆ ಮಾತಾಡೋಣ. ಸಂಪಾದಕೀಯ ಪುಟದಲ್ಲಿ ಬರುವ ಲೇಖನಗಳೆಲ್ಲ ಪತ್ರಕರ್ತರೇ ಬರೆಯುವುದಿಲ್ಲ. ಆದರೆ ಸಂಪಾದಕೀಯವನ್ನು ಮಾತ್ರ ಆಯಾ ಪತ್ರಿಕೆಯ ಸಂಪಾದಕ ಅಥವಾ ಸಂಪಾದಕೀಯ ಮಂಡಳಿಯ ಹಿರಿಯ ಸದಸ್ಯರು ಬರೆಯುತ್ತಾರೆ.

ಸಂಪಾದಕೀಯವನ್ನು ಬರೆಯುವಾಗಲೂ ಅಷ್ಟೆ. ಸಿದ್ಧಾಂತಗಳು, ಇಸಮ್ಮುಗಳನ್ನು ತಲೆಯಲ್ಲಿ ಇಟ್ಟುಕೊಂಡು ಬರೆಯಲು ಕುಳಿತರೆ ವಾಸ್ತವ ಕಣ್ಣಿಗೆ ಕಾಣಿಸುವುದಿಲ್ಲ. ತಮ್ಮ ಸಿದ್ಧಾಂತವನ್ನು ಒಪ್ಪುವವರು ಮಾಡಿದ್ದೆಲ್ಲ ಸರಿಯಾಗಿಯೇ ಕಾಣುತ್ತದೆ; ತಮ್ಮ ಸಿದ್ಧಾಂತವನ್ನು ಒಪ್ಪದವರು ಮಾಡಿದ್ದೆಲ್ಲ ತಪ್ಪಾಗಿಯೇ ಕಾಣಿಸುತ್ತದೆ. ಸಿದ್ಧಾಂತಗಳನ್ನು ಅತಿಯಾಗಿ ಪ್ರತಿಪಾದಿಸಲು ಹೊರಟರೆ ಟಿಬೆಟ್‌ನಲ್ಲಿನ ಬೌದ್ಧ ಭಿಕ್ಷುಗಳ ಮೇಲೆ ಕಮ್ಯುನಿಸ್ಟ್ ಚೀನಾ ನಡೆಸುತ್ತಿರುವ ದಬ್ಬಾಳಿಕೆ, ಹಿಂಸೆ ಕೂಡ ಸಮರ್ಥನೀಯ ಅನಿಸುತ್ತದೆ. ಭಾರತದ ಮೇಲೆ ಚೀನಾ ೧೯೬೨ರಲ್ಲಿ ಆಕ್ರಮಣ ನಡೆಸಿದ್ದು ತಪ್ಪು ಅಂತ ಅನ್ನಿಸುವುದಿಲ್ಲ. ಅಷ್ಟಲ್ಲದೆ, ನಮ್ಮ ದೇಶದ ಹೆಸರಾಂತ ಆಂಗ್ಲ ಪತ್ರಿಕೆಯೊಂದರ ಸಿದ್ಧಾಂತದ ಕನ್ನಡಕಕ್ಕೆ ಕಂಡಂತೆ, ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ಕಮ್ಯುನಿಸ್ಟರು ನಡೆಸಿದ ಬಡವರ ಮಾರಣಹೋಮದಲ್ಲಿ ತಪ್ಪು ಕಾಣಿಸುವುದೇ ಇಲ್ಲ! ನಕ್ಸಲರು ಒಂದೆಕರೆ ಜಮೀನು ಇರುವವರನ್ನು ಕೊಂದರೆ ಅದು ಒಂದು ಜೀವಿಯನ್ನು ಹಿಂಸಿಸುವ ಪರಿಯಂತೆ ತೋರದೆ, ಭೂಮಾಲಕರ ವಿರುದ್ಧದ ಹೋರಾಟದಂತೆ ಕಾಣಿಸುತ್ತದೆ!!

ಇನ್ನು ಅಂಕಣ ಬರಹಗಳ ಮಜವೇ ಬೇರೆ. ಸಾಮಾನ್ಯವಾಗಿ ದಿನಪತ್ರಿಕೆಗಳು ಪ್ರತಿದಿನ ಒಬ್ಬ ವ್ಯಕ್ತಿಯ ಅಂಕಣವನ್ನು ಪ್ರಕಟಿಸುತ್ತವೆ. ಕೆಲವು ಪತ್ರಿಕೆಗಳು ತಮ್ಮ ಸ್ಥಳಾವಕಾಶವನ್ನು ನೋಡಿಕೊಂಡು ಎರಡು ಮೂರು ಅಂಕಣವನ್ನೂ ಪ್ರತಿದಿನ ಪ್ರಕಟಿಸಬಹುದು.

ನಾಗೇಶ ಹೆಗಡೆಯವರು ಪರಿಸರ, ವಿಜ್ಞಾನ ವಿಚಾರಗಳ ಬಗ್ಗೆ ಬರೆಯುವಂತೆ, ವಿಶ್ವೇಶ್ವರ ಭಟ್ಟರು ಬರೆಯುವ ಸುದ್ದಿಮನೆ ಕಥೆಯಂತೆ, ವಿ ಎನ್ ಸುಬ್ಬರಾವ್ ಬರೆಯುವ ವಾರದ ರಾಜಕೀಯ ಬೆಳವಣಿಗೆಗಳ ಕುರಿತ ಬರೆಹದಂತೆ, ಅಂಕಣ ಬರಹ ಎಂದರೆ ಅದೊಂದು ರೀತಿಯಲ್ಲಿ ಜನಸಾಮಾನ್ಯರ ವಿಶ್ವಕೋಶವಿದ್ದಂತೆ.

ಈಗ ಕೆಲವು ತಿಂಗಳುಗಳ ಹಿಂದೆ ದಿ ಹಿಂದೂ ಪತ್ರಿಕೆಯಲ್ಲಿ ಆ ಪತ್ರಿಕೆಯ ರೀಡರ್ಸ್ ಎಡಿಟರ್ (ಓದುಗರ ಸಂಪಾದಕ) ಕೆ ನಾರಾಯಣನ್ ಅವರ ಆನ್‌ಲೈನ್ ಆಂಡ್ ಆಫ್‌ಲೈನ್ ಎಂಬ ಅಂಕಣ ಪ್ರತಿ ಹದಿನೈದು ದಿನಗಳಿಗೊಮ್ಮೆ ಪ್ರಕಟವಾಗುತ್ತಿತ್ತು. ಪತ್ರಿಕೋದ್ಯಮದ ಭಾಷೆ, ನಿಯಮಗಳು, ಬದಲಾವಣೆಗಳು, ಕಾನೂನುಗಳು, ಪತ್ರಿಕಾ ರಂಗದ ದಿಗ್ಗಜರುಗಳ ಬಗ್ಗೆ ಅವರು ತಮ್ಮ ಅಂಕಣದಲ್ಲಿ ಬರೆಯುತ್ತಿದ್ದರು. ಅದಲ್ಲದೆ ಅವರು ಕೆಲಸ ಮಾಡುವ ಪತ್ರಿಕೆಯಾದ ದಿ ಹಿಂದೂ ದಲ್ಲಿ ಬರುವ ವರದಿಗಳ ಬಗ್ಗೆಯೂ ವಸ್ತುನಿಷ್ಠ ವಿಮರ್ಶೆಗಳನ್ನು ಅವರು ಬರೆಯುತ್ತಿದ್ದರು. ಅಂಥ ಅಂಕಣಗಳು ಇಂದಿನ ಪತ್ರಿಕೆಗಳಲ್ಲಿ ಬಹಳ ಅಪರೂಪ. ಅವರು ತಮ್ಮ ಸೇವೆಯಿಂದ ನಿವೃತ್ತರಾಗುವುದರೂಂದಿಗೆ ಅವರ ಅಂಕಣ ಬರವಣಿಗೆಯೂ ನಿಂತಿತು. ಈಗ ಅದನ್ನು ವಿಶ್ವನಾಥನ್ ಅವರು ಬರೆಯುತ್ತಿದ್ದಾರೆ.

ಅಂಕಣ ಬರಹದಲ್ಲಿಯೂ ಕೂಡ ವಾಸ್ತವವನ್ನು ಗ್ರಹಿಸುವ ಬರಹಗಾರನ ಪ್ರಜ್ಞೆ ತನ್ನ ಜಾದೂ ತೋರಿಸುತ್ತದೆ. ಅಂಕಣಕಾರ ಬರೆಯುವ ವಸ್ತುವಿನ ಇತಿಹಾಸ, ಅದರ ಈಗಿನ ಸ್ವರೂಪ ಮತ್ತು ಮುಂದೊಂದು ದಿನ ಅದು ಪಡೆದುಕೊಳ್ಳಬಹುದಾದ ರೂಪದ ಬಗ್ಗೆ ಓದುಗರನ್ನು ಹಿಡಿದಿಡಬಲ್ಲದು. ಬೇಕಿದ್ದರೆ ನಾಗೇಶ ಹೆಗಡೆಯವರ ಪರಿಸರ ಸಂಬಂದಿ ಬರಹಗಳನ್ನು ಒಮ್ಮೆ ಓದಿ ನೋಡಿ. ಹಸಿರುಕ್ರಾಂತಿಯ ಕಾರಣ, ಪರಿಣಾಮಗಳ ಬಗ್ಗೆ ಅವರು ಬರೆದಿರುವ ಲೇಖನಗಳನ್ನು ಓದಿದರೆ ಅವರ ತಿಳಿವಳಿಕೆಯ ಆಳ ನಮ್ಮ ಗಮನಕ್ಕೂ ಬರುತ್ತದೆ.
ಪತ್ರಿಕೋದ್ಯಮ ಏನು ಎಂಬ ಪ್ರಶ್ನೆಗೆ ಒಂದು ಸ್ವಾರಸ್ಯಕರವಾದ ಉತ್ತರವಿದೆ: Truth is factual and unalterable. Unravelling of truth which always sides with society and is subsumed in community consciousness is journalism. ಸತ್ಯವೆಂಬುದು ನೈಜತೆಯನ್ನು ಎತ್ತಿಹಿಡಿಯುತ್ತದೆ. ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಸಮೂಹದ ಸಾಕ್ಷಿಪ್ರಜ್ಞೆಯಲ್ಲಿ ಅಂತರ್ಗತವಾಗಿರುವ ಸತ್ಯವನ್ನು ಹೊರಗೆಳೆಯುವುದೇ ನಿಜವಾದ ಪತ್ರಿಕೋದ್ಯಮ.

ಪತ್ರಿಕೋದ್ಯಮಕ್ಕೆ ಸಿದ್ಧಾಂತಗಳ ಹಂಗಿನ ಅವಶ್ಯಕತೆಯಿಲ್ಲ. ಪತ್ರಿಕೋದ್ಯಮದ ನಿಷ್ಠೆಯಿರಬೇಕಾದದ್ದು ವಾಸ್ತವದೆಡೆಗೆ ಮಾತ್ರ. ಅದಲ್ಲದೆ ಯಾರೋ ಯಾವುದೋ ಒಂದು ಕಾಲಘಟ್ಟದಲ್ಲಿ ಹೇಳಿದ ಸಿದ್ಧಾಂತಗಳು ಎಲ್ಲಾ ಕಾಲಕ್ಕೂ ಅನ್ವಯವಾಗಬೇಕಾಗಿಲ್ಲ. ಎಲ್ಲ ಕಾಲಕ್ಕೊ ಅನ್ವಯವಾಗುವ ವಾಸ್ತವವಾದವೇ ಪತ್ರಿಕೋದ್ಯಮದ ನಿಜವಾದ ಸಿದ್ಧಾಂತ.

ಏಕೆಂದರೆ ವಾಸ್ತವವಾದಿ ಪತ್ರಕರ್ತನಿಗೆ ಸತ್ಯ-ಅಸತ್ಯಗಳ ನಡುವಣ ವ್ಯತ್ಯಾಸ ಸ್ಪಷ್ಟವಾಗಿ ತಿಳಿಯುತ್ತದೆ. ಅದನ್ನು ತಿಳಿದವ ಓದುಗನ ವಿಶ್ವಾಸಕ್ಕೆ ಧಕ್ಕೆ ತರಲಾರ. ಪ್ರಜಾಪ್ರಭುತ್ವದ ನಾಲ್ಕನೆಯ ಆಧಾರ ಸ್ತಂಭದ ಗೌರವಕ್ಕೆ ಚ್ಯುತಿ ತರಲಾರ.

ವಿಜಯ್ ಜೋಶಿ

Monday, November 16, 2009

ನಿಷ್ಠೆಯೊಂದೇ ನಿರೀಕ್ಷೆ, ಪತ್ರಕರ್ತನಿಗೆಲ್ಲಿದೆ ರಕ್ಷೆ?

“ಇತ್ತೀಚೆಗೆ ನಡೆದ ಸಮೀಕ್ಷೆಯೊಂದರ ಪ್ರಕಾರ ಜನಸಾಮಾನ್ಯರ ದ್ವೇಷಕ್ಕೆ ಅತ್ಯಂತ ಹೆಚ್ಚು ಒಳಗಾಗಿರುವ ಮೂರು ವ್ಯಕ್ತಿಗಳೆಂದರೆ ರಾಜಕಾರಣಿಗಳು, ಪೋಲೀಸರು ಮತ್ತು ಪತ್ರಕರ್ತರು. ಪತ್ರಕರ್ತರು ಈಗ ಮೂರನೆಯ ಸ್ಥಾನದಲ್ಲಿರಬಹುದು. ಆದರೆ ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಪತ್ರಕರ್ತರು ಮೊದಲನೆಯ ಸ್ಥಾನವನ್ನು ಆಕ್ರಮಿಸುವ ದಿನ ಬಹಳ ದೂರವಿಲ್ಲ ಎಂದು ನನಗನಿಸುತ್ತದೆ.”

ಯಾವಾಗಲೂ ಮಾಧ್ಯಮಗಳನ್ನು ತೆಗಳುವವರ ಒಂದು ದೊಡ್ಡ ಗುಂಪೇ ನಮ್ಮ ಸಮಾಜದಲ್ಲಿದೆ. ಅಂಥ ಗುಂಪಿಗೆ ಸೇರಿದ ವ್ಯಕ್ತಿಯೊಬ್ಬರು ಈ ಮೇಲಿನ ಮಾತನ್ನು ಹೇಳಿದ್ದರೆ ಅದನ್ನು ಅಲಕ್ಷಿಸಿಬಿಡಬಹುದಿತ್ತು. ಆದರೆ ಇತ್ತೀಚೆಗೆ ಮಾಧ್ಯಮದ ಹಿರಿಯ ವ್ಯಕ್ತಿಯೊಬ್ಬರು ಈ ರೀತಿ ಅಭಿಪ್ರಾಯಪಟ್ಟಿರುವುದರಿಂದ ಈ ಮಾತಿನ ಬಗ್ಗೆ ಗಂಭೀರವಾಗಿ ಪತ್ರಿಕೋದ್ಯಮದ ಬಗ್ಗೆ ಪ್ರೀತಿ ಇರುವ ಪ್ರತಿಯೊಬ್ಬರೂ ಆಲೋಚಿಸಬೇಕಾಗಿದೆ.

ಆ ಹಿರಿಯರ ಬಗ್ಗೆ, ಅವರ ಮಾತಿನ ಬಗ್ಗೆ ಗೌರವ ಇಟ್ಟುಕೊಂಡೇ ನನ್ನ ಮುಂದಿನ ಬರೆಹವನ್ನು ಬೆಳೆಸುತ್ತಿದ್ದೇನೆ.

ಭಾರತದ ಸಂವಿಧಾನದ ಪ್ರಕಾರ ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗ ಪ್ರಜಾಪ್ರಭುತ್ವದ ಮೂರು ಅಂಗಗಳು. ಸಂವಿಧಾನ ಇವೆಲ್ಲವಕ್ಕೂ ಮೇಲು. ಈ ಯಾವ ಅಂಗಗಳೂ ಸಂವಿಧಾನವನ್ನು ಮೀರಿ ಕೆಲಸ ಮಾಡುವಂತಿಲ್ಲ. ಹಾಗೆ ಯಾವುದೇ ಒಂದು ಅಂಗ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಕೆಲಸ ಮಾಡಲು ಹವಣಿಸಿದರೆ ಆ ಅಂಗಕ್ಕೆ ಲಗಾಮು ಹಾಕಲು ಬಲವಾದ, ಸ್ವತಂತ್ರವಾದ ನ್ಯಾಯಾಂಗ ನಮ್ಮಲ್ಲಿದೆ.
ನೆನಪಿಡಿ ಎಲ್ಲಿಯೂ ಕೂಡ ‘ಮಾಧ್ಯಮಗಳು ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ’ ಎಂದು ಸಂವಿಧಾನಲ್ಲಿ ಬರೆದಿಲ್ಲ. ಆದರೆ ಪತ್ರಿಕಾರಂಗವನ್ನು ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ ಎಂದು ನಾವೆಲ್ಲ ಪ್ರೀತಿಯಿಂದ, ಗೌರವದಿಂದ ಒಪ್ಪಿಕೊಂಡಿದ್ದೇವೆ. ಹಾಗೂ ಪತ್ರಿಕಾರಂಗ ಪ್ರಜಾಪ್ರಭುತ್ವದ ಉಳಿದ ಮೂರು ಅಂಗಗಳಂತೆಯೇ ರಾಷ್ಟ್ರನಿರ್ಮಾಣದ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳಬೇಕು ಎಂದು ಅಪೇಕ್ಷೆಪಡುತ್ತೇವೆ, ಅಷ್ಟೆ!

ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗ ಪ್ರಜಾಪ್ರಭುತ್ವದ ಆಧಾರ ಸ್ಥಂಭಗಳು ಅಂತ ನಮ್ಮ ಸಂವಿಧಾನವೇ ಅಧಿಕೃತವಾಗಿ ಘೋಷಿಸಿರುವುದರಿಂದ ಈ ಮೂರು ಅಂಗಗಳಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿಗಳಿಗೆ ಸಂವಿಧಾನದತ್ತವಾಗಿ ರಕ್ಷಣೆ ಇದೆ. ರಾಜಕಾರಣಿಗಳಿಗೆ ಅವರವರ ಸ್ಥಾನಕ್ಕನುಗುಣವಾಗಿ ವಿವಿಧ ಶ್ರೇಣಿಯ ಭದ್ರತೆ ಇದೆ. ನ್ಯಾಯಾಂಗದಲ್ಲಿರುವವರಿಗೂ (ನ್ಯಾಯಾಧೀಶರಿಗೆ) ಭದ್ರತೆ ಇದೆ. ಹಾಗೆಯೇ ಕಾರ್ಯಾಂಗದವರಿಗೂ ಅವರವರ ಸ್ಥಾನಕ್ಕನುಗುಣವಾದ ಭದ್ರತೆ ಇರುತ್ತದೆ. ಈ ಮೂರು ಅಂಗಗಳಲ್ಲಿರುವ ಎಲ್ಲರಿಗೂ ಸರಕಾರಿ ಭದ್ರತೆ ಇರದೆ ಇರಬಹುದು. ಆದರೆ ಸಂದರ್ಭ ಬಂದಾಗ ಸಂವಿಧಾನದ ಚೌಕಟ್ಟಿನೊಳಗೆ ಸರಕಾರಿ ಭದ್ರತೆಯನ್ನು ಕೇಳಲು ಅವರಿಗೆ ಅವಕಾಶ ಇರುವುದಂತೂ ಎಲ್ಲರಿಗೂ ತಿಳಿದ ಸತ್ಯ.
ಸಂವಿಧಾನವೇ ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗಕ್ಕೆ ಅಧಿಕೃತ ಮಾನ್ಯತೆ ನೀಡಿರುವುದರಿಂದ ಈ ಮೂರು ಅಂಗಗಳಲ್ಲಿ ಕೆಲಸ ಮಾಡುವವರು ಸರಕಾರಿ ಹಣದಿಂದಲೇ ಸಂಬಳ ಪಡೆಯುತ್ತಾರೆ. ಸರಕಾರಿ ಹಣ ಅಂದರೆ ಜನರ ತೆರಿಗೆ ಹಣ. ಹಾಗಾಗಿಯೇ ಅವರು ಜನರಿಗೆ ಉತ್ತರದಾಯಿಯಾಗಿರಬೇಕು ಮತ್ತು ಅವರ ಆಸ್ತಿಪಾಸ್ತಿಗಳನ್ನು ಸಾರ್ವಜನಿಕವಾಗಿ ಘೋಷಣೆ ಮಾಡಬೇಕು ಎಂದು ನಿರೀಕ್ಷಿಸುವುದು ಸಂವಿಧಾನಬದ್ಧವೇ ಆಗಿರುತ್ತದೆ.

ಆದರೆ ಒಮ್ಮೆ ಪತ್ರಕರ್ತರ ಪರಿಸ್ಥಿತಿಯ ಬಗ್ಗೆ ಆಲೋಚನೆ ಮಾಡಿ.
ಹೇಗಿದ್ದರೂ ಪತ್ರಿಕಾರಂಗ ಸಂವಿಧಾನದ ಪ್ರಕಾರ ಭಾರತೀಯ ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ ಅಲ್ಲ. ಆನರು ಪ್ರೀತಿ, ಗೌರವದಿಂದ ಪತ್ರಿಕಾರಂಗಕ್ಕೆ ಆ ಮಾನ್ಯತೆಯನ್ನು ಕೊಟ್ಟಿದ್ದಾರೆ ಅಷ್ಟೆ. ಆದರೆ ಜನರ ಪ್ರೀತಿ, ಗೌರವಗಳು ಸಾಂವಿಧಾನಿಕ ರಕ್ಷಣೆಯನ್ನು ನೀಡುವುದಿಲ್ಲವಲ್ಲ? ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗಗಳಲ್ಲಿ ಕೆಲಸ ಮಾಡುವವರಿಗಿರುವಂತೆ ಪತ್ರಿಕಾರಂಗದಲ್ಲಿರುವವರಿಗೆ ವಿಶೇಷ ರಕ್ಷಣೆಯನ್ನೇನೂ ನೀಡುವುದಿಲ್ಲವಲ್ಲ? ಅದಲ್ಲದೆ ಪತ್ರಿಕೆಗಳ ನ್ಯೂಸ್‌ಪ್ರಿಂಟ್‌ಗೆ ಸರಕಾರದ ಸಬ್ಸಿಡಿ ಮತ್ತು ಸರಕಾರದ ಕೆಲವು ಜಾಹೀರಾತುಗಳು ಆಗಾಗ ಪತ್ರಿಕೆಗಳಿಗೆ ಸಿಗುವುದನ್ನು ಬಿಟ್ಟರೆ ಬೇರೆ ಯಾವ ರೀತಿಯಿಂದಲೂ ಸರಕಾರದ (ಜನರ) ಹಣವನ್ನು ಪತ್ರಿಕೆಗಳು ಉಪಯೋಗಿಸಿಕೊಳ್ಳುವುದಿಲ್ಲ. ಅವು ಬದುಕಿರುವುದೇ ಓದುಗರು ನೀಡುವ ಹಣ ಮತ್ತು ಜಾಹೀರಾತುದಾರರು ನೀಡುವ ಹಣದಮೇಲೆ. ಪರಿಸ್ಥಿತಿ ಹೀಗಿರುವಾಗ ಪತ್ರಕರ್ತರೆಲ್ಲಾ ತಮ್ಮ ಆಸ್ತಿಯನ್ನು ಘೋಷಣೆ ಮಾಡಬೇಕು ಎಂದು ಆಗ್ರಹಿಸುವುದಕ್ಕೆ ಸಾಂವಿಧಾನಿಕ ಆಧಾರ ಯಾವುದು?

ಹಾಗಂತ ಪತ್ರಕರ್ತರಿಂದ ನಿಷ್ಪಕ್ಷಪಾತ ಬರೆಹ, ಪ್ರಾಮಾಣಿಕತೆ ಮತ್ತು ದೇಶದ ಸಮಗ್ರ ಅಭಿವೃದಿಗಾಗಿ ದುಡಿಯುವುದನ್ನು ಅಪೇಕ್ಷಿಸಬಾರದು ಅಂತಲ್ಲ. ಭಾರತದ ಉಳಿದೆಲ್ಲ ನಾಗರಿಕರಂತೆ ಪತ್ರಕರ್ತ ಕೂಡ ಭಾರತದ ಪ್ರಜೆಯೇ. ಹಾಗೆಯೇ ಪ್ರತಿಯೊಬ್ಬ ಭಾರತೀಯ ಪ್ರಜೆ ಯಾವ ರೀತಿಯಲ್ಲಿ ಈ ದೇಶಕ್ಕೆ, ಈ ಸಮಾಜಕ್ಕೆ ನಿಷ್ಠನಾಗಿರಬೇಕೋ ಪತ್ರಕರ್ತನೂ ಅಷ್ಟೇ ನಿಷ್ಠೆಯನ್ನು ದೇಶಕ್ಕೆ, ಸಮಾಜಕ್ಕೆ ತೋರಿಸಲೇಬೇಕು. ಆ ಬಗ್ಗೆ ಖಂಡಿತಾ ಎರಡು ಮಾತಿಲ್ಲ.
ಆದರೆ ದೇಶಕ್ಕಾಗಿ ಪತ್ರಕರ್ತ ಕೆಲಸ ಮಾಡಬೇಕು ಎಂದು ಆಗ್ರಹಿಸುವಾಗ ಇನ್ನೊಂದು ಸೂಕ್ಷ್ಮವನ್ನೂ ನಾವು ಗಮನಿಸಬೇಕು.

ದೇಶದ ಒಳಿತಿಗಾಗಿ ಪತ್ರಕರ್ತನೊಬ್ಬ ಬರೆಯುವಾಗ (ಅಥವಾ ದೃಶ್ಯಗಳನ್ನು ಚಿತ್ರೀಕರಿಸುವಾಗ) ಆತ ಅನಿವಾರ್ಯವಾಗಿ ಪ್ರಭುತ್ವದ ವೈಖರಿಯನ್ನು ಪಶ್ನಿಸಬೇಕಾದ ಅನೇಕ ಸಂದರ್ಭಗಳನ್ನು ಎದುರಿಸುತ್ತಾನೆ. ಪ್ರಭುತ್ವವನ್ನು ವಿರೋಧಿಸುವುದು ಎಂದರೆ ನಮ್ಮ ದೇಶದಲ್ಲಿ ಸಾಮಾನ್ಯದ ಮಾತೇ? ನಾವೆಷ್ಟೇ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತಾಡಿದರೂ ಇವತ್ತು ಪತ್ರಕರ್ತನೊಬ್ಬ ರಾಜಕಾರಣಿಯೊಬ್ಬನ ವಿರುದ್ಧ ಬರೆದರೆ ಆತ ಒಂದಲ್ಲಾ ಒಂದು ದಿನ ಹಾಗೆ ಬರೆದ ಪತ್ರಕರ್ತನ ವಿರುದ್ಧ ತನ್ನ ದ್ವೇಷವನ್ನು ಹೇಗೆ ತೀರಿಸಿಕೊಳ್ಳಬೇಕು ಅಂತ ಕಾಯುತ್ತಲೇ ಇರುತ್ತಾನೆ. ಇಂಥ ಸಂದರ್ಭದಲ್ಲಿ ಪತ್ರಕರ್ತ ಏನು ಮಾಡಬೇಕು? ತನ್ನ ಜೀವಕ್ಕೆ ಖಂಡಿತವಾಗಿಯೂ ಅಪಾಯವಿದೆ ಅಂತ ಖಚಿತವಾಗಿ ಗೊತ್ತಿದ್ದರೆ ಕೆಲ ಕಾಲದ ಮಟ್ಟಿಗೆ ಪೋಲೀಸ್ ರಕ್ಷಣೆಯನ್ನು ಪಡೆದುಕೊಳ್ಳಬಹುದು. ಆದರೆ ಅದನ್ನೇನೂ ಶಾಶ್ವತವಾಗಿ ಪಡೆದುಕೊಳ್ಳಲು ಸಾಧ್ಯವಿಲ್ಲ. ಹೀಗಿರುವಾಗ ಪತ್ರಕರ್ತ ಯಾವ ಧೈರ್ಯದಲ್ಲಿ ಪ್ರಭುತ್ವವನ್ನು ಪ್ರಶ್ನಿಸಿಯಾನು? ೨೪ಘಿ೭ ಪತ್ರಕರ್ತರನ್ನು ಬೈಯುತ್ತಾ ಕುಳಿತಿರುವವರಿಂದ ಉತ್ತರದ ನಿರೀಕ್ಷೆಯಿದೆ.
ಹಿಂದೆ ಕನ್ನಡದ ಹೆಸರಾಂತ ದಿನಪತ್ರಿಕೆಯೊಂದರ ಜನಪ್ರಿಯ ಅಂಕಣಕಾರರೊಬ್ಬರು ನಕ್ಸಲರ ವಿರುದ್ಧ ನೇರಮಾತುಗಳ ಲೇಖನ ಬರೆದಾಗ ಉಡುಪಿ ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ನಕ್ಸಲರು ಕರಪತ್ರ ಹಂಚಿ ಆ ಅಂಕಣಕಾರರ ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ್ದರು ಎಂದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಇಲ್ಲಿ ಅಂಕಣಕಾರರ ಧೈರ್ಯವನ್ನು ಮೆಚ್ಚಬಹುದಾದರೂ ಅವರಿಗೆ ನಕ್ಸಲರಿಂದ ಯಾವ ಅಪಾಯ ಎದುರಾಗದಂತೆ ರಕ್ಷಣೆ ನೀಡುವವರು ಯಾರು ಎಂಬ ಪ್ರಶ್ನೆ ಬರುತ್ತದೆ. ಅವರು ರಾಜಕಾರಣಿಯೋ ಅಥವಾ ಐಎಎಸ್ ಅಧಿಕಾರಿಯೋ ಆಗಿದ್ದರೆ ಅವರಿಗೆ ಸರಕಾರದಿಂದ ಸದಾಕಾಲ ಭದ್ರತೆ ಸಿಗುತ್ತಿತ್ತು. ಆದರೆ ಪತ್ರಕರ್ತ/ಅಂಕಣಕಾರನಿಗೆ? ಸಿಗುವುದು ಪ್ರಶಂಸೆ ಮಾತ್ರ. ಜೊತೆಗೊಂದಿಷ್ಟು ಮಂದಿಯಿಂದ ಬಯ್ಗುಳಗಳು.

ಪತ್ರಕರ್ತರೇನೂ ಜೀವ ಭಯವನ್ನು ಬಿಟ್ಟು ದುಡಿಯಲು ಬಂದಿರುವ ರೋಬೋಟ್‌ಗಳಲ್ಲವಲ್ಲ? ಅವರಿಗೂ ಅವರದೇ ಆದ ಸಂಸಾರವಿದೆ. ಪ್ರೀತಿಪಾತ್ರರಿದ್ದಾರೆ. ಹಾಗಿರುವಾಗ ಕೇವಲ ಪತ್ರಕರ್ತರು ಮಾತ್ರ ಜೀವ ಭಯ ಬಿಟ್ಟು ಪ್ರಭುತ್ವವನ್ನು ಮತ್ತು ಸಮಾಜದ ಅನ್ಯಾಯ, ಹುಳುಕುಗಳನ್ನು ಪ್ರಶ್ನಿಸುತ್ತಿರಬೇಕು ಎಂದು ನಿರೀಕ್ಷಿಸುವುದನ್ನು ಏನೆಂದು ಕರೆಯಬೇಕು?
ಪತ್ರಕರ್ತನಿಂದ ವೃತ್ತಿಪರತೆಯನ್ನು ನಿರೀಕ್ಷಿಸುವುದಕ್ಕೂ, ಮನುಷ್ಯಪ್ರಯತ್ನಕ್ಕೆ ಮೀರಿದ ಕಾರ್ಯವನ್ನು ನಿರೀಕ್ಷಿಸುವುದಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಪತ್ರಕರ್ತರಿಂದ ಪ್ರಾಮಾಣಿಕತೆಯನ್ನು, ಪತ್ರಿಕಾ ಧರ್ಮದ ಪಾಲನೆಯನ್ನು ನಿರೀಕ್ಷಿಸಬೇಕು. ಆದರೆ ಸಂವಿಧಾನದಿಂದ ಯಾವ ವಿಶೇಷ ಅಧಿಕಾರ ನೀಡದೆಯೆ ಪ್ರಭುತ್ವದ ವಿರುದ್ಧ ಹೋರಾಡಬೇಕು ಎನ್ನುವ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ಎಷ್ಟು ಸರಿ?

ಭಾರತದ ಸಂವಿಧಾನದಲ್ಲೆಲ್ಲೂ ಪತ್ರಿಕಾ ಸ್ವಾತಂತ್ರ್ಯ ಎಂದು ಪ್ರತ್ಯೇಕವಾದ ವರ್ಗೀಕರಣ ಇಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲೇ ಪತ್ರಿಕೆಗಳ ಮೂಲಕ ತಮಗೆ ಅನಿಸಿದ್ದನ್ನು ಬರೆಯುವ ಸ್ವಾತಂತ್ರ್ಯ ನಮಗೆ (ಭಾರತದ ನಾಗರಿಕರಿಗೆ) ದಕ್ಕಿದೆ. ಪತ್ರಕರ್ತನಿಗೆ ಅಂತ ಯಾವ ವಿಶೇಷ ಅಭಿವ್ಯಕ್ತಿ ಸ್ವಾತಂತ್ರ್ಯವೂ ಇಲ್ಲ. ಹಾಗಾಗಿ ಒಬ್ಬ ವ್ಯಕ್ತಿ ಪತ್ರಿಕಾ ರಂಗದಲ್ಲಿ ಇದ್ದಾನೆ ಎಂಬ ಮಾತ್ರಕ್ಕೆ ಅವನಿಂದ ಉಳಿದ ಪ್ರಜೆಗಳು ಮಾಡಲು ಇಚ್ಛಿಸದ ಕೆಲಸಗಳನ್ನು ನಿರೀಕ್ಷಿಸುವುದು ತಪ್ಪಾದೀತು.
ಇನ್ನು ಕೆಲವು ಮಂದಿ ಪತ್ರಿಕಾ ರಂಗ ಇಂದು ಉದ್ಯಮವಾಗಿದೆ, ಅದರಲ್ಲಿ ಯಾವ ಆದರ್ಶಗಳೂ ಕಾಣಿಸುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ. ಅಂಥವರ ಆರೋಪದ ಬಗ್ಗೆಯೂ ಗೌರವವಿದೆ. ಆದರೆ ಪತ್ರಿಕಾರಂಗದಿಂದ ಮಾತ್ರ ಏಕೆ ಆದರ್ಶಗಳನ್ನು ನಿರೀಕ್ಷಿಸಬೇಕು. ಇಡೀ ಸಮಾಜದಿಂದ ಏಕೆ ಉನ್ನತ ಧ್ಯೇಯಗಳನ್ನು, ಆದರ್ಶಗಳನ್ನು ನಿರೀಕ್ಷಿಸಬಾರದು?

ಪತ್ರಿಕೆಯೊಂದು ಜನರಿಗೆ ಸತ್ಯಸುದ್ದಿಯನ್ನು ಮಾತ್ರ ಕೊಡಬೇಕು, ಸುಳ್ಳನ್ನು ಯಾವ ಕಾರಣಕ್ಕೂ ಕೊಡಬಾರದು ಎಂದು ನಿರೀಕ್ಷಿಸುವುದು ಸರಿ. ಆದರೆ ಆದರ್ಶದ ವ್ಯಸನದಲ್ಲಿ ಪತ್ರಿಕೆಯೊಂದು ತನ್ನ ಮುಖಪುಟದಲ್ಲಿ ದೊಡ್ಡ ಪ್ರಮಾಣದ ಜಾಹೀರಾತುಗಳನ್ನೇ ಪ್ರಕಟಿಸಬಾರದು ಎಂದೆಲ್ಲ ಮಾತಾಡುವುದು ಅರ್ಥಹೀನ. ಪತ್ರಿಕಾರಂಗ ಇವತ್ತು ಒಂದು ಪಕ್ಕಾ ಉದ್ಯಮವಾಗಿದೆ. ಅಲ್ಲಿ ಒಬ್ಬ ಮನುಷ್ಯ ಹತ್ತು ರೂಪಾಯಿ ಬಂಡವಾಳ ಹೂಡಿ ಅದರಲ್ಲಿ ಒಂದಷ್ಟು ಲಾಭ ಪಡೆಯಲು ಪ್ರಯತ್ನಿಸುತ್ತಾನೆ. ಅದರಲ್ಲಿ ತಪ್ಪೇನಿದೆ? ನ್ಯಾಯವಾಗಿ ಲಾಭ ಮಾಡಿಕೊಳ್ಳಲು ನಮ್ಮ ಸಂವಿಧಾನವೇನು ಬೇಡವೆಂದಿಲ್ಲವಲ್ಲ?
ಹಾಗಂತ ಇಂದಿನ ಕೆಲ ಮಾಧ್ಯಮಗಳು ಮಾಡುತ್ತಿರುವ ಅತಿರಂಜಿತ ವರದಿಗಳನ್ನು, ಕೆಲ ಟ್ಯಾಬ್ಲಾಯ್ಡ್‌ಗಳ ಹೂರಣವನ್ನೆಲ್ಲಾ ವ್ಯಾಪಾರಿ ಮನಸ್ಥಿತಿಯಲ್ಲಿ ಒಪ್ಪಿಕೊಳ್ಳಬೇಕು ಎಂದಲ್ಲ. ಆದರೆ ಆದರ್ಶದ ಗುಂಗನ್ನು ಅತಿಯಾಗಿ ತಲೆಗೆ ಹಚ್ಚಿಕೊಂಡು ಪತ್ರಿಕೆಗಳನ್ನು ಸಂತರು ನಡೆಸುವ ಆಶ್ರಮದ ಲಾಭೋದ್ದೇಶವಿಲ್ಲದ ಪ್ರಕಟಣೆಗಳು ಎಂದು ಅರ್ಥೈಸುವುದು ಬೇಡ.

ಸ್ವಾತಂತ್ರ್ಯೂತ್ತರ ಕಾಲದಲ್ಲಿದ್ದಂತಹ ಆದರ್ಶ, ಧ್ಯೇಯಗಳಿಗಾಗಿಯೇ ಹೋರಾಡಿದ ಪತ್ರಿಕೆಗಳನ್ನು ಇವತ್ತು ನಿರೀಕ್ಷಿಸುವುದೇ ತಪ್ಪು ಅಂತ ಹೇಳುತ್ತಿಲ್ಲ. ಆದರೆ ಸ್ವಾತಂತ್ರ್ಯ ಪೂರ್ವದಲ್ಲಿದ್ದಂತಹ ಹೋರಾಟದ ಕಿಚ್ಚು ಇವತ್ತು ಇಡೀ ಭಾರತೀಯ ಸಮಾಜದಲ್ಲಿಯೇ ಸತ್ತುಹೋಗಿದೆ. ಇಡೀ ಸಮಾಜದಲ್ಲಿಯೇ ಸತ್ತುಹೋಗಿರುವ ಕಿಚ್ಚನ್ನು ಕೇವಲ ಪತ್ರಕರ್ತರಲ್ಲಿ ಮಾತ್ರ ನಿರೀಕ್ಷಿಸುವ, ಉಳಿದವರಿಂದ ಆ ಕೆಚ್ಚನ್ನು ನಿರೀಕ್ಷಿಸದೆ ಇರುವ ಇಬ್ಬಂದಿತನ ಬೇಡ.
(ನವೆಂಬರ್ ೧೬, ೨೦೦೯ ರ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

Tuesday, November 10, 2009

ಪತ್ರಕರ್ತರ ಸಾಕ್ಷಿಪ್ರಜ್ಞೆ: ಪಿ. ಸಾಯಿನಾಥ್

ಪತ್ರಕರ್ತ ಪಿ ಸಾಯಿನಾಥ್ ಒಮ್ಮೆ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಫೆಲೋಶಿಪ್‌ಗಾಗಿ ಅರ್ಜಿ ಹಾಕಿದ್ದರು. ಅದರ ಸಂದರ್ಶನಕ್ಕಾಗಿ ಕರೆಯೂ ಬಂತು. ಟೈಮ್ಸ್ ಪತ್ರಿಕೆಯ ಸಂಪಾದಕರುಗಳ ಮುಂದೆ ಕುಳಿತು ತನಗೆ ಫೆಲೋಶಿಪ್ ಸಿಕ್ಕರೆ ಏನೇನು ಮಾಡುತ್ತೇನೆ ಎಂಬುದನ್ನು ಸವಿವರವಾಗಿ ಹೇಳುತ್ತಿದ್ದರು.

"ಇಂದಿನ ಪತ್ರಿಕೆಗಳು ದೇಶದ ಸಾಮಾಜಿಕ ವ್ಯವಸ್ಥೆಯ ಮೇಲ್ಭಾಗದಲ್ಲಿರುವ ಶೇಕಡಾ ೫ ರಷ್ಟು ಮಂದಿಯ ಬಗ್ಗೆ ಮಾತ್ರ ಬರೆಯುತ್ತಿವೆ, ನಾನು ಈ ದೇಶದ ಸಾಮಾಜಿಕ ವ್ಯವಸ್ಥೆಯ ಕೆಳಭಾಗದಲ್ಲಿರುವ ಶೇಕಡಾ ೫ ರಷ್ಟು ಮಂದಿಯ ಬಗ್ಗೆ ಬರೆಯುತ್ತೇನೆ" ಎಂದು ಅದಾಗಲೇ ತೀರ್ಮಾನಿಸಿದ್ದ ಪಿ ಸಾಯಿನಾಥ್ ಟೈಮ್ಸ್ ಧಣಿಗಳ ಮುಂದೆಯೂ ತಮಗಿರುವ ಗ್ರಾಮೀಣ ವರದಿಗಾರಿಕೆಯಲ್ಲಿನ ಆಸಕ್ತಿಯ ಕುರಿತು ಹೇಳಿದರು. ಆಗ ಟೈಮ್ಸ್‌ನ ಸಂಪಾದಕ ಮಹಾಶಯನೊಬ್ಬ "ನಮ್ಮ ಪತ್ರಿಕೆಯ ಓದುಗರಿಗೆ ನೀವು ಬರೆಯುವ ಗ್ರಾಮೀಣ ವರದಿಯ ಬಗ್ಗೆ ಏನೂ ಆಸಕ್ತಿ ಇಲ್ಲ, ಏನು ಮಾಡ್ತೀರಾ" ಎಂದು ಕೇಳಿದ.

"ಓದುಗರಿಗೆ ಏನು ಬೇಕು, ಏನು ಬೇಡ ಎಂದು ಹೇಳಲು ನೀವು ನಿಮ್ಮ ಓದುಗರನ್ನು ಕೊನೆಯ ಬಾರಿ ಭೇಟಿಯಾಗಿದ್ದು ಯಾವಾಗ?" ಎಂದು ಕೂಡಲೇ ಮರುಪ್ರಶ್ನಿಸಿದರು ಸಾಯಿನಾಥ್. ಸಾಯಿನಾಥ್ ಪ್ರಶ್ನೆ ಅದೆಷ್ಟು ತೀಕ್ಷ್ಣವಾಗಿತ್ತೆಂದರೆ ಅವರಿಗೆ ಸಂದರ್ಶನಕಾರರಿಂದ ತಿರುಗಿ ಪ್ರಶ್ನೆಯೇ ಬರಲಿಲ್ಲ. ಅದಲ್ಲದೆ ಅವರಿಗೆ ಟೈಮ್ಸ್‌ನ ಫೆಲೋಶಿಪ್ ಕೂಡ ದೊರೆಯಿತು.

ಪೇಜ್ ತ್ರಿ ಪತ್ರಿಕೋದ್ಯಮಕ್ಕೇ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂಬ ಆರೋಪಕ್ಕೆ ಈಡಾಗಿರುವ ಟೈಮ್ಸ್‌ನ ಧಣಿಗಳ ಮುಂದೆ ಕುಳಿತು ಅವರ ಬಾಯಿ ಮುಚ್ಚಿಸುವುದು ಬಹುಷಃ ಸಾಯಿನಾಥ್‌ಗೆ ಮಾತ್ರ ಸಾಧ್ಯವೇನೋ. ಸಿಂಹದ ಗುಹೆಗೆ ಹೋಗಿ ಅಲ್ಲಿಯೇ ಅದನ್ನು ಸೋಲಿಸುವುದೆಂದರೆ ಸಾಮಾನ್ಯದ ಮಾತೇ?

ಅಂಥ ಪತ್ರಕರ್ತ, ದಿ ಹಿಂದೂ ಪತ್ರಿಕೆಯ ಗ್ರಾಮೀಣ ವರದಿಗಾರ ಪಿ ಸಾಯಿನಾಥ್ ಯಾವತ್ತಿಗೂ ನನ್ನ ಪಾಲಿನ ಆದರ್ಶ.

ಟೈಮ್ಸ್‌ನ ಫೆಲೋಶಿಪ್ ಸಿಕ್ಕಿದ್ದೇ ತಡ ಸಾಯಿನಾಥ್ ದೇಶದ ಬಡ ಜಿಲ್ಲೆಗಳ ಹಾದಿ ಹಿಡಿದರು. ದೇಶದ ಐದು ರಾಜ್ಯಗಳ ಹತ್ತು ಬಡ ಜಿಲ್ಲೆಗಳನ್ನು ತಿರುಗಿದರು. ಈ ತಿರುಗಾಟದಲ್ಲಿ ಅವರು ಸುಮಾರು ಒಂದು ಲಕ್ಷ ಕಿಲೋಮೀಟರ್ ದೂರವನ್ನು ಕ್ರಮಿಸಿದ್ದರು. ಅದ್ದರಲ್ಲೂ ಐದು ಸಾವಿರ ಕಿಲೋಮೀಟರ್ ದೂರವನ್ನು ನಡೆದೇ ಕ್ರಮಿಸಿದ್ದರು! ಟೈಮ್ಸ್ ಆಫ್ ಇಂಡಿಯಾದಂತಹ ಪತ್ರಿಕೆಯೇ ಸಾಯಿನಾಥ್ ಅವರ ಒಟ್ಟೂ 84 ಗ್ರಾಮೀಣ ವರದಿಗಳನ್ನು 18 ತಿಂಗಳ ಅವಧಿಯಲ್ಲಿ ಪ್ರಕಟಿಸಿತು. ಮುಂದೆ ಆ ಲೇಖನಗಳೆಲ್ಲ ಒಟ್ಟಾಗಿ Everyone Loves A Good Drought ಎಂಬ ಹೆಸರಿನಲ್ಲಿ ಪುಸ್ತಕವಾಗಿ ಬಂತು. ಆ ಪುಸ್ತಕ ಇಂದಿಗೂ ಗ್ರಾಮೀಣ ವರದಿಗಾರಿಕೆಯ ಬಗ್ಗೆ ಆಸಕ್ತಿಯಿರುವ ಪತ್ರಿಕೋದ್ಯಮ ವಿದ್ಯಾರ್ಥಿಗಳು ಮತ್ತು ಪತ್ರಕರ್ತರ ಪಾಲಿಗೆ ಭಗವದ್ಗೀತೆಯಿದ್ದಂತೆ.

ಕೆಲ ಕನ್ನಡ ಟಿವಿ ವಾರ್ತಾ ವಾಹಿನಿಗಳನ್ನು ನೋಡಿಕೊಂಡು ಈ ಪತ್ರಕರ್ತರೆಲ್ಲ ಹೀಗೇ ಎಂದು ಮೂದಲಿಸುವ ಎಡಬಿಡಂಗಿಗಳಿಗೆ ಮತ್ತು ಕೆಲ ಕರಿ ಬಣ್ಣದ ಕನ್ನಡ ಟ್ಯಾಬ್ಲಾಯ್ಡ್‌ಗಳನ್ನು ಓದಿಕೊಂಡು ಪತ್ರಿಕೋದ್ಯಮ ಎಂದರೆ ಇಷ್ಟೇ ಎಂದು ಉಡಾಫೆಯಲ್ಲಿ ಮಾತನಾಡುವ ಅತಿಬುದ್ಧಿವಂತರಿಗೆ ಪತ್ರಿಕೋದ್ಯಮದ ಬಗ್ಗೆ ಅಭಿಮಾನ ಇರುವವರು ಹೆಮ್ಮೆಯಿಂದ ಕೇಳಬೇಕಾದ ಪ್ರಶ್ನೆ ಎಂದರೆ: "ಸ್ವಾಮಿ, ನೀವು ಸಾಯಿನಾಥ್‌ರ ವರದಿಗಳನ್ನು ಓದಿದ್ದೀರಾ?"

ಸಾಯಿನಾಥ್‌ರ Everyone Loves A Good Drought ಪುಸ್ತಕ ಬಿಡುಗಡೆಯಾಗಿ ಎರಡು ವರ್ಷಗಳ ಕಾಲ ಟಾಪ್ ಟೆನ್ ಪುಸ್ತಗಳ ಸಾಲಿನಲ್ಲಿ ನಂಬರ್ ೧ ಆಗಿತ್ತು! ಅದಲ್ಲದೆ ನಂತರ ಖ್ಯಾತ ಪುಸ್ತಕ ಪ್ರಕಾಶನ ಸಂಸ್ಥೆ ಪೆಂಗ್ವಿನ್ ಇಂಡಿಯಾದವರ ಸಾರ್ವಕಾಲಿಕ ಶ್ರೇಷ್ಠ ಪುಸ್ತಕಗಳ ಸಾಲಿನಲ್ಲಿ ಅದು ಒಂದಾಗಿದೆ! ಅಷ್ಟೊಂದು ದೊಡ್ಡಮಟ್ಟದ ಮಾರಾಟ ಕಂಡ ಆ ಪುಸ್ತಕದ ರಾಯಲ್ಟಿಯ ಅಷ್ಟೂ ಹಣವನ್ನು ಸಾಯಿನಾಥ್ ಯುವ ಗ್ರಾಮೀಣ ವರದಿಗಾರರನ್ನು ಪ್ರೋತ್ಸಾಹಿಸಲು ವಿನಿಯೋಗಿಸಿದರು!! ಪತ್ರಿಕೋದ್ಯಮದಲ್ಲಿನ ಸಾಧನೆಗಾಗಿ ೨೦೦೭ನೆಯ ಇಸವಿಯ ಮ್ಯಾಗ್ಸೆಸೇ ಪ್ರಶಸ್ತಿ ಸಾಯಿನಾಥ್‌ರನ್ನು ಅರಸಿಕೊಂಡು ಬಂತು.

ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದ ರೈತರ ಆತ್ಮಹತ್ಯೆಗಳ ಬಗ್ಗೆ ಅವರು ಬರೆದ ಲೇಖನ ಮಾಲೆ ಪ್ರಧಾನಿ ಮನಮೋಹನ್ ಸಿಂಗ್ ವಿದರ್ಭಕ್ಕೆ ಧಾವಿಸಿ ಬರುವಂತೆ ಮಾಡಿತು. ಅಲ್ಲದೆ, ವಿದರ್ಭ ಪ್ರಾಂತ್ಯದ ರೈತರ ಕಲ್ಯಾಣಕ್ಕೆಂದೇ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸುವಂತೆ ಮಾಡಿತು. ಪತ್ರಕರ್ತನ ಬರಹಗಳಿಂದ ಸಾಮಾಜಿಕ ಬದಲಾವಣೆ ಅಸಾಧ್ಯ ಎಂದು ಆರೋಪಿಸುವವರಿಗೆ ಮತ್ತು ವ್ಯವಸ್ಥೆಯ ವಿರುದ್ಧ ಎದ್ದು ನಿಲ್ಲುವ ತಾಕತ್ತನ್ನು ಪತ್ರಿಕೋದ್ಯಮ ಕಳೆದುಕೊಂಡಿದೆ ಎಂದು ಮಾತಾಡುವವರಿಗೆ ಉತ್ತರದಂತೆ ವಿದರ್ಭ ಘಟನೆ ನಮ್ಮ ಕಣ್ಣ ಮುಂದೆ ನಿಲ್ಲುತ್ತದೆ.

ಇರಲಿ, ಸಾಯಿನಾಥ್‌ರ ಸಾಧನೆಗಳು ಸಾಕಷ್ಟು ದೊಡ್ಡದಿದೆ.ಸಾಯಿನಾಥ್‌ರಂತಹ ಪತ್ರಕರ್ತರು ಯಾವ ಪತ್ರಿಕೆಯಲ್ಲಿದ್ದರೂ ಅವರ ಇರುವಿಕೆಯೇ ಪತ್ರಿಕೋದ್ಯಮಕ್ಕೊಂದು ಹೆಮ್ಮೆ. ಅವರು ಕೇವಲ ತಾವು ಮಾತ್ರ ಬೆಳೆಯುವುದಿಲ್ಲ. ಇಡೀ ಜನ ಸಮೂಹವನ್ನು ಬೆಳೆಸುತ್ತಾರೆ. ಸಾಮಾಜಿಕ ಮೌಲ್ಯಗಳು ಕುಸಿಯುತ್ತಿರುವ ಸಂದರ್ಭದಲ್ಲಿಯೂ ತಾವು ನಂಬಿದ ಮೌಲ್ಯಗಳನ್ನು ಬಲವಾಗಿ ಪ್ರತಿಪಾದಿಸುತ್ತಾ ನಮಗೆಲ್ಲ ಹೊಸ ನಾಡಿನ, ರಸದ ಬೀಡಿನ ಭರವಸೆ ನೀಡುವ ರೂಪಕವಾಗಿ ಕಾಣಿಸುತ್ತಾರೆ.

Friday, October 23, 2009

"ಪ್ರತಿಭಟನೆ, ಬಂದ್‌ನ ಆಚೆಗೂ ವಿದ್ಯಾರ್ಥಿ ಪರಿಷತ್ ಕೆಲಸ ಮಾಡುತ್ತಿದೆ"


ಅಕ್ಟೋಬರ್ ೯ ರಿಂದ ೧೧ರವರೆಗೆ ಬಳ್ಳಾರಿಯ ರಾಘವ ಕಲಾಮಂದಿರಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಯೋಜಿಸಿದ್ದ ’ರಂಗತೋರಣ’ ವಿದ್ಯಾರ್ಥಿ ನಾಟಕೋತ್ಸವ ಬಹಳ ಅದ್ದೂರಿಯಾಗಿ ನಡೆಯಿತು. ನಾಟಕೋತ್ಸವದಲ್ಲಿ ಸ್ಪರ್ಧಿಸಿದ್ದ ಸುಮಾರು ೨೭ ನಾಟಕಗಳ ಪೈಕಿ ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಮ್‌ಬಿಅ ಕಾಲೇಜಿನ ವಿದ್ಯಾರ್ಥಿಗಳು ಆಡಿದ ’ನಾನು ಮತ್ತು ನಾಳೆ’ ನಾಟಕ ಪ್ರಥಮ ಬಹುಮಾನ ಪಡೆದುಕೊಂಡಿತು.

೨೦೦೩ನೆಯ ಇಸವಿಯಲ್ಲಿ ಪ್ರಾರಂಭಗೊಂಡ ಈ ನಾಟಕೋತ್ಸವಕ್ಕೆ ಈ ಬಾರಿ ಐದರ ಹರೆಯ. ಇಡೀ ನಾಟಕೋತ್ಸವದ ರೂವಾರಿ, ನಾಟಕೋತ್ಸವದುದ್ದಕ್ಕೂ ಪಾದರಸದಂತೆ ಓಡಾಡುತ್ತಾ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರನ್ನು ಪ್ರತಿ ನಿಮಿಷವೂ ಹುರಿದುಂಬಿಸುತ್ತಿದ್ದ ಪ್ರೊ. ಭೀಮಸೇನ್ ಅವರ ಜೊತೆ ಆಡಿದ ಎರಡು ಮಾತುಗಳು ಇಲ್ಲಿವೆ.

*****

ಎಬಿವಿಪಿಯವರು ಎಂದರೆ ಕೇವಲ ಬಂದ್ ಮಾಡುವವರು, ಪ್ರತಿಭಟನೆ ಮಾಡುವವರು ಎಂಬೆಲ್ಲಾ ನಕಾರಾತ್ಮಕ ಹಣೆಪಟ್ಟಿಗಳಿದ್ದರೂ ವಿದ್ಯಾರ್ಥಿ ಪರಿಷತ್ತಿನವರು ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಹೊರತೆಗೆಯುವತ್ತ ಮಾಡುತ್ತಿರುವ ಕೆಲಸದ ಕೆಲವು ಝಲಕ್ ಕೂಡ ಇಲ್ಲಿದೆ.

*****

"ಇದು ನಮ್ಮ ಐದನೆಯ ವರ್ಷದ ರಂಗತೋರಣ. ಈ ನಾಟಕೋತ್ಸವವನ್ನು ಆರಂಭಸಲು ಸಾಕಷ್ಟು ಕಾರಣಗಳಿವೆ. ಸಾಮಾನ್ಯವಾಗಿ ಎಬಿವಿಪಿಯ ಹುಡುಗರು ಎಂದರೆ ಬಂದ್ ಮಾಡುವವರು, ಗಲಾಟೆ ಮಾಡುವವರು, ಪ್ರತಿಭಟನೆ ಮಾಡುವವರು ಎಂಬೆಲ್ಲಾ ಹಣೆಪಟ್ಟಿಗಳಿವೆ. ಆದರೆ ಬಂದ್, ಪ್ರತಿಭಟನೆ ಮತ್ತು ಗಲಾಟೆಯ ಆಚೆಗೂ ಎಬಿವಿಪಿಯ ಹುಡುಗರು ಕೆಲಸ ಮಾಡುತ್ತಾರೆ. ಅವರ ಪ್ರತಿಭೆ ಅನೇಕ ಕ್ಷೇತ್ರಗಳಲ್ಲಿ ವ್ಯಾಪಿಸಿದೆ."

"ರಜಾ ದಿನಗಳಲ್ಲಿ ಎಬಿವಿಪಿಯ ಹುಡುಗರಿಗೆ ಸಮಯ ನಿರ್ವಹಣೆ, ನಾಯಕತ್ವದ ಕೌಶಗಳು, ಪರಿಣಾಮಕಾರಿ ಸಂವಹನ ಕಲೆ, ವಿಜ್ಞಾನ ಹೀಗೆ ಅನೇಕ ವಿಷಯಗಳ ಬಗ್ಗೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ನಮಗೆ ಇಂಥ ಎಲ್ಲ ಕಲೆ-ಕೌಶಲಗಳನ್ನು ಒಂದೇ ಮಾಧ್ಯಮದ ಮೂಲಕ ಪರಿಣಾಮಕಾರಿಯಾಗಿ ಕಲಿಸುವ ಆಸೆಯಿತ್ತು."

"ಇಂಥ ಸಂದರ್ಭದಲ್ಲಿಯೇ ಕನ್ನಡ ಹಿರಿಯ ನಾಟಕಕಾರ ಡಾ ಚಂದ್ರಶೇಖರ ಕಂಬಾರರಿಗೆ ನಾಡೋಜ ಪ್ರಶಸ್ತಿ ಬಂತು. ಆಗ ನಾವೂ ನಾಟಕಗಳ ಬಗ್ಗೆ ಏನಾದರೂ ಮಾಡಬೇಕು. ನಾಟಕಕ್ಕಾಗಿ ಕೆಲಸ ಮಾಡಬೇಕು ಎಂಬ ಆಸೆ ಮನಸ್ಸಿನಲ್ಲಿ ಮೂಡಿತು."

"ನಾಯಕತ್ವದ ಕಲೆ, ಪರಿಣಾಮಕಾರಿ ಸಂವಹನ, ಸಮಯ ನಿರ್ವಹಣೆ ಇಂಥಹ ಅನೇಕ ಕೌಶಲಗಳನ್ನು ವ್ಯವಸ್ಥಿತವಾಗಿ ಮೈಗೂಡಿಸಿಕೊಳ್ಳಬೇಕಾದದ್ದು ಒಬ್ಬ ನಾಟಕಕಾರನ ಮತ್ತು ನಟನ ಅಗತ್ಯ ಗುಣ. ಎಬಿವಿಪಿಯವರು ಹೇಗಿದ್ದರೂ ಇಂಥ ಕೌಶಲಗಳನ್ನು ಅನೇಕ ಕಾರ್ಯಕ್ರಮಗಳ ಮೂಲಕ ತಮ್ಮ ಹುಡುಗರಿಗೆ ಕಲಿಸುತ್ತಾರೆ. ಹಾಗೆ ಕಲಿತ ವಿಚಾರಗಳ ಅಭಿವ್ಯಕ್ತಿ ಹೇಗಾಗುತ್ತದೆ ಎಂದು ನೋಡಬೇಕು. ಅದಕ್ಕೆ ನಾಟಕಕ್ಕಿಂತ ಪರಿಣಾಮಕಾರಿ ಮಾಧ್ಯಮ ಯಾವುದಿದೆ?"

"ಈ ಒಂದು ಅಂಶವನ್ನು ಮನಸ್ಸಿನಲ್ಲಿಟ್ಟುಕೊಂಡು ನಾವು ೨೦೦೩ ರಲ್ಲಿ ಬಳ್ಳಾರಿಯಲ್ಲಿ ಜಿಲ್ಲಾ ಮಟ್ಟದ ನಾಟಕೋತ್ಸವವನ್ನು ’ರಂಗತೋರಣ’ ಎಂಬ ಹೆಸರಿನಲ್ಲಿ ಆರಂಭಿಸಿದೆವು. ಜಿಲ್ಲಾ ಮಟ್ಟದಲ್ಲಿ ನಡೆದ ಮೊದಲ ನಾಟಕೋತ್ಸವದಲ್ಲಿ ಏಳು ತಂಡಗಳು ಭಾಗವಹಿಸಿದ್ದವು."

"ನಂತರ ೨೦೦೪ರಲ್ಲಿ ಎರಡನೆಯ ರಂಗತೋರಣ ವಿಭಾಗ ಮಟ್ಟದಲ್ಲಿ ನಡೆಯಿತು. ಗುಲ್ಬರ್ಗಾ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳಾದ ಗುಲ್ಬರ್ಗ, ಬಳ್ಳಾರಿ, ರಾಯಚೂರು, ಕೊಪ್ಪಳ ಮತ್ತು ಬೀದರ್ ಜಿಲ್ಲೆಗಳ ಕಾಲೇಜು ವಿದ್ಯಾರ್ಥಿ ನಾಟಕ ತಂಡಗಳು ಈ ಉತ್ಸವದಲ್ಲಿ ಭಾಗವಹಿಸಿದ್ದವು. ೨೦೦೭ನೆಯ ಇಸವಿಯಿಂದ ಈ ಉತ್ಸವ ರಾಜ್ಯಮಟ್ಟದ್ದಾಯಿತು."

"ಪಿಯುಸಿಯಿಂದ ಹಿಡಿದು ಪಿಎಚ್‌ಡಿ ಮಾಡುತ್ತಿರುವ ವಿದ್ಯಾರ್ಥಿಗಳವರೆಗೆ ಈ ನಾಟಕೋತ್ಸವದಲ್ಲಿ ಭಾಗವಹಿಸುತ್ತಾರೆ. ಇಲ್ಲಿ ಸಿದ್ಧಾಂತ ಬೇಧಗಳನ್ನು ಮರೆತು ಎಲ್ಲ ರೀತಿಯ ನಾಟಕಗಳನ್ನು ಪ್ರದರ್ಶಿಸಲಾಗುತ್ತದೆ."

"ಈ ನಾಟಕೋತ್ಸವವನ್ನು ಪ್ರತಿ ವರ್ಷವೂ ಬಳ್ಳಾರಿಯಲ್ಲೇ ನಡೆಸುವುದಕ್ಕೆ ಕಾರಣವಿದೆ. ಬಳ್ಳಾರಿಯ ರಾಘವ ಅವರು ಮತ್ತು ಬೀಚಿಯವರು ನಾಟಕ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು ಸಂಪಾದಿಸಿದ್ದವರು. ಅದು ನಿಮಗೂ ಗೊತ್ತು. ಬಳ್ಳಾರಿಯ ರಾಘವರಂತೂ ಷೇಕ್ಸ್‌ಪಿಯರ್‌ನ ನಾಟಕಗಳನ್ನು ಜಾರ್ಜ್ ಬರ್ನಾರ್ಡ್ ಷಾ ಎದುರಿಗೆ ಆಡಿತೋರಿಸಿದ್ದರಂತೆ. ಷೇಕ್ಸ್‌ಪಿಯರ್‌ಗೂ ಬರ್ನಾರ್ಡ್ ಷಾಗೂ ಆಗಿಬರುತ್ತಿರಲಿಲ್ಲ. ಆದರೂ ಬರ್ನಾರ್ಡ್ ಷಾ ರಾಘವರು ಆ ನಾಟಕಗಳನ್ನು ಆಡುತ್ತಿದ್ದಾರೆ ಎಂಬ ಕಾರಣಕ್ಕಾಗಿಯೇ ಅದನ್ನು ನೋಡುತ್ತಿದ್ದರಂತೆ."

"ಒಮ್ಮೆ ಗಾಂಧೀಜಿಯವರು ಇಲ್ಲಿಗೆ ಬಂದಿದ್ದಾಗ ಅವರೆದುರಿಗೆ ಒಂದು ನಾಟಕ ತೋರಿಸುವ ಆಸೆಯಾಯಿತಂತೆ. ಗಾಂಧೀಜಿಯವರಿಗೆ ಬಹಳ ಕೆಲಸವಿತ್ತು. ಆದರೂ ಇಪ್ಪತ್ತು ನಿಮಿಷಗಳ ಮಟ್ಟಿಗೆ ನಾಟಕ ನೋಡಲು ಕುಳಿತರು. ನಾಟಕ ನೋಡುವುದರಲ್ಲಿ ತಲ್ಲೀನರಾಗಿಬಿಟ್ಟ ಗಾಂಧೀಜಿ ತಮ್ಮ ಪ್ರಾರ್ಥನೆಯ ಸಮಯವನ್ನೂ ಮರೆತು ನಾಟಕ ನೋಡಿದರಂತೆ. ನಂತರ ರಾಘವರ ಬೆನ್ನು ತಟ್ಟಿ ಹೋದರಂತೆ. ಅಷ್ಟೇ ಅಲ್ಲದೆ, ತಿಲಕರೆದುರು ಮಹಾತ್ಮಾ ಕಬೀರ್ ನಾಟಕವನ್ನು ಆಡಿ ತೋರಿಸಿದ್ದರಂತೆ ನಮ್ಮ ರಾಘವರು."

"ಅಂಥ ನಾಟಕಕಾರರು ಮತ್ತು ಸಾಹಿತಿಗಳು ಜನಿಸಿದ ಈ ನಾಡಿನಲ್ಲಿ ನಾಟಕ ಕಾರ್ಯಕ್ರಮಗಳಿಗೆ ಬಹುವಾದ ಬೆಂಬಲವಿದೆ. ಇಲ್ಲಿ ವೃತ್ತಿ ರಂಗಭೂಮಿ ಕಲಾವಿದರ ಬಹುದೊಡ್ಡ ದಂಡೇ ಇದೆ. ಇದು ಒಂದರ್ಥದಲ್ಲಿ ವೃತ್ತಿ ರಂಗಭೂಮಿ ಕಲಾವಿದರ ತವರೂರು."

"ಹಾಗಾಗಿ ಬಳ್ಳಾರಿಯ ಸಾಂಸ್ಕೃತಿಕ ಮುಖವನ್ನು ಜನರಿಗೆ ತೋರಿಸುವುದಕ್ಕೋಸ್ಕರ ಮತ್ತು ರಾಜಕೀಯದಾಚೆಗೂ ಬಳ್ಳಾರಿಗೆ ಒಂದು ಒಳ್ಳೆಯ ಹೆಸರಿದೆ ಎಂಬುದನ್ನು ಜನರಿಗೆ ತೋರಿಸಲು ಈ ಉತ್ಸವವನ್ನು ಬಳ್ಳಾರಿಯಲ್ಲೇ ನಡೆಸುತ್ತೇವೆ."

Thursday, September 10, 2009

ಸಹಿಷ್ಣುತೆಯ ಪಾಠ; ಪ್ರತ್ಯೇಕತೆಯ ಆಟ

ಭಾರತದಲ್ಲಿ ಕೋಮುಗಲಭೆಗಳು ಸಂಭವಿಸುವುದು, ಕೋಮುಗಲಭೆಗಳು ಅತಿರೇಕದ ಹಂತ ಮುಟ್ಟಿ, ಗಲಭೆ ನಡೆಸಿದವರಿಗೇ ಸುಸ್ತಾಗಿ ನಂತರ ತಣ್ಣಗಾಗುವುದು ನಮ್ಮಲ್ಲಿ ಯಾರಿಗೂ ಹೊಸ ವಿಚಾರವಲ್ಲ. ಹಾಗೆ ಗಲಭೆಗಳು ಸಂಭವಿಸಿ ತಣ್ಣಗಾದ ನಂತರ ಒಂದಿಷ್ಟು ಮಂದಿ ಸೇರಿ ಶಾಂತಿ ಸಭೆ ನಡೆಸಿ ಪತ್ರಿಕೆಗಳಲ್ಲಿ ಫೋಟೊ ಹಾಕಿಸಿಕೊಳ್ಳುವುದು, ಇನ್ನೊಂದಿಷ್ಟು ಮಂದಿ (ಅತಿ)ಬುದ್ಧಿಜೀವಿಗಳು ’ಸತ್ಯಶೋಧನಾ ಸಮಿತಿ’ ಎಂಬ ಹೆಸರಿನಲ್ಲಿ ತಂಡವೊಂದನ್ನು ಕಟ್ಟಿಕೊಂಡು ಗಲಭೆ ನಡೆದ ಸ್ಥಳಕ್ಕೆ ಸ್ವಯಂಪ್ರೇರಣೆಯಿಂದ ತೆರಳಿ ’ಸತ್ಯಶೋಧನೆ’ ನಡೆಸುವುದು ಕೂಡ ನಮ್ಮ ಪಾಲಿಗೆ ತೀರಾ ಸಾಮಾನ್ಯ ಎಂಬಂತಾಗಿಬಿಟ್ಟಿದೆ.

ಹೆಚ್ಚಿನ ಸತ್ಯಶೋಧನಾ ಸಮಿತಿಗಳ ವರದಿಗಳು ಸಾಮಾನ್ಯವಾಗಿ ಒಂದೇ ರೀತಿ ರೀತಿಯಲ್ಲಿ ಇರುತ್ತವೆ ಎಂಬುದೂ ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ.

ಕೋಮುಗಲಭೆಗಳಿಗೆಲ್ಲ ಭಾರತದ ಬಹುಸಂಖ್ಯಾತರೇ ಕಾರಣರು. ಬಹುಸಂಖ್ಯಾತ ಸಮುದಾಯವನ್ನು ಪ್ರತಿನಿಧಿಸುವ ಸಂಘಟನೆಗಳೆಲ್ಲಾ ಕೋಮುವಾದವನ್ನೇ ಪ್ರತಿಪಾದಿಸುತ್ತವೆ ಮತ್ತು ಈ ದೇಶದಲ್ಲಿ ನಡೆಯುವ ಎಲ್ಲ ಕೋಮುಗಲಭೆಗಳಿಗೂ ಬಹುಸಂಖ್ಯಾತ ಸಮುದಾಯವನ್ನು ಪ್ರತಿನಿಧಿಸುವ ಸಂಘಟನೆಗಳೇ ಕಾರಣ ಎಂದು ಷರಾ ಬರೆಯುವುದು ನಮ್ಮಲ್ಲಿ ಅನೂಚಾನವಾಗಿ ನಡೆದುಕೊಂಡು ಬಂದ ಪದ್ಧತಿಯೇ ಆಗಿದೆ. ದೇಶದ ಬಹುಸಂಖ್ಯಾತರ ಸಂಘಟನೆಗಳೇ ಕೋಮುಗಲಭೆಯನ್ನು ಪ್ರಚೋದಿಸುತ್ತವೆ ಎಂಬುದನ್ನು ಬಹುಷಃ ಈ ಸತ್ಯಶೋಧನಾ ಸಮಿತಿಗಳು ಘಟನಾಸ್ಥಳಕ್ಕೆ ಆಗಮಿಸುವ ಮೊದಲೇ ನಿರ್ಧರಿಸಿಕೊಂಡು ಬಂದಿರುತ್ತವೆಯೇನೋ?!

ಅದಿರಲಿ. ಗಲಭೆಗಳು ನಡೆದ ಅನಂತರದಲ್ಲಿ ಬಹುಸಂಖ್ಯಾತ ಸಮುದಾಯದವರಿಗೆ ನೀವು ಸಹಿಷ್ಣುಗಳಾಗಿರಿ ಎಂದು ಹೇಳುವುದು ನಮ್ಮ ನಾಡಿನ ಬುದ್ಧಿಜೀವಿಗಳಿಗೆ, ವಿಚಾರವಾದಿಗಳಿಗೆ ಹುಟ್ಟುತ್ತಲೇ ಸಿದ್ಧಿಸಿರುವ ಕಲೆ.

ಸಹಿಷ್ಣು ಎಂಬ ಪದದ ವಾಚ್ಯಾರ್ಥ ಮತ್ತು ಭಾವಾರ್ಥ ಕಷ್ಟವನ್ನು ಸಹಿಸಿಕೊ ಎಂದಾಗುತ್ತದೆ. (ಸಹಿಷ್ಣು ಎಂಬ ಪದದ ಅರ್ಥ ಇದಲ್ಲ ಎಂದಾದರೆ ನಿಜಾರ್ಥ ಯಾವುದು ಎಂಬುದನ್ನು ಅಲ್ಲಗಳೆಯುವವರೇ ತಿಳಿಸಿಕೊಡಬೇಕು.)

ಮನುಷ್ಯನಾದವನು ಕಟುಕನನ್ನು ಸಹಿಸಿಕೊಳ್ಳಬೇಕಾಗುತ್ತದೆ. ಕಷ್ಟಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ. ಅನ್ಯಾಯಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ. ಹಾಗೂ ಇನ್ನೂ ಅನೇಕ ಅಸಹಜ ಸಂಗತಿಗಳನ್ನು, ತಮ್ಮ ನಿರೀಕ್ಷೆಗೆ ವಿರುದ್ಧವಾಗಿ ಸಾಗುವ ಸಂಗತಿಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ. ಆದರೆ ಯಾರಿಗೂ ಕೂಡ ಸಹಜತೆಯನ್ನು ಸಹಿಸಿಕೊಳ್ಳುವ ಅಗತ್ಯವಿರುವುದಿಲ್ಲ.

ಮಲೆನಾಡಿನಲ್ಲಿ ಹುಟ್ಟಿದವನಿಗೆ ಜಡಿಮಳೆಯನ್ನು ಸಹಿಸಿಕೊಳ್ಳಬೇಕಾದ ಅಗತ್ಯವಿರುವುದಿಲ್ಲ; ಅವನಿಗೆ ಆ ಮಳೆಯನ್ನು ಒಫ್ಫಿಕೊಳ್ಳುವ ಅಗತ್ಯವಿರುತ್ತದೆ. ಏಕೆಂದರೆ ಮಲೆನಾಡಿನ ಪ್ರಕೃತಿಯೇ ಜಡಿಮಳೆಯನ್ನು ಪೋಷಿಸುತ್ತಿರುತ್ತದೆ. ಆದರೆ ಅದೇ ಮಲಿನಾಡಿನವನಿಗೆ ಬಯಲುಸೀಮೆಯ ಬಿರುಸೆಖೆ ಅಸಹನೀಯವೆನಿಸುತ್ತದೆ. ಅವನು ಕೆಲವು ಸಂದರ್ಭಗಳಲ್ಲಿ ಆ ಸೆಖೆಯನ್ನು ಸಹಿಸಿಕೊಳ್ಳಬೇಕಾಗುತ್ತದೆ. ಯಾವುದು ಅವನ ಪ್ರಕೃತಿಗೆ ವಿರುದ್ಧವೋ ಅದನ್ನು ಅವನು ಸಹಿಸಿಕೊಳ್ಳಬೇಕು. ಯಾವುದು ಅವನ ಪ್ರಕೃತಿಗೆ ಪೂರಕವೋ ಅದನ್ನು ಆತ ಖುಷಿಯಿಂದ ಅನುಭವಿಸಬೇಕು ಮತ್ತು ಅನುಭವಿಸುತ್ತಾನೆ.

ಅಂದರೆ ಸಹಿಷ್ಣುಗಳಾಗಿರುವುದು ಅಂದರೆ ನಮಗೆ ಅಸಹನೀಯವೆನಿಸುವುದನ್ನೂ ಸಹಿಸಿಕೊಳ್ಳುವುದು. ಅಥವಾ ನಮಗೆ ಒಗ್ಗಿಬರದ್ದನ್ನು ಸಹಿಸಿಕೊಳ್ಳುವುದು. ಅದರ ಜೊತೆಗೆ ಕೆಲವು ಹೊಂದಾಣಿಕೆಗಳನ್ನು ಮಾಡಿಕೊಂಡು ಬದುಕುವುದು ಎಂದರ್ಥ.

ಈ ದೇಶದ ಬಹುಸಂಖ್ಯಾತ ಸಮುದಾಯದವರ ಬಳಿ ನೀವು ಸಹಿಷ್ಣುಗಳಾಗಿರಬೇಕು ಎಂದು ಬುದ್ಧಿಜೀವಿಗಳು ಉಪದೇಶಿಸುವುದೂ ಇದೇ ಅರ್ಥದಲ್ಲಿಯೇ.

ಸರಿ, ಈ ರೀತಿಯ ಸಹಿಷ್ಣುತೆ ಪ್ರಜಾಪ್ರಭುತ್ವವಿರುವ ದೇಶದಲ್ಲಿ ಒಂದು ಹಂತದವರೆಗೆ ಅನಿವಾರ್ಯ. ಯಾರೂ ಅದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಅದಲ್ಲದೆ ನಮ್ಮ ಸಂವಿಧಾನ ಪ್ರತಿಯೊಬ್ಬರಿಗೂ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿರುವಾಗ, ವಿವಿಧ ಮತ-ಧರ್ಮಗಳ ನಡುವೆ ಸಾಮರಸ್ಯವಿರಲು ಸಹಿಷ್ಣುತೆ ಅತ್ಯಗತ್ಯ. ಆದರೆ ಇವತ್ತು ಬಹುಸಂಖ್ಯಾತ ಸಮುದಾಯದವರನ್ನು ಸಹಿಷ್ಣುಗಳಾಗಿರಿ ಎಂದು ಹೇಳುವುದು ಮತ್ತು ಅಲ್ಪಸಂಖ್ಯಾತ ಸಮುದಾಯದ ಅಸಹಿಷ್ಣುತೆಯ ಬಗ್ಗೆ ಜಾಣ ಮೌನ ತೋರಿಸುವುದು ಬುದ್ಧಿಜೀವಿ ವರ್ಗ ಯಾವತ್ತಿಂದಲೂ ಬೆಳೆಸಿಕೊಂಡು ಬಂದಿರುವ ವೈಚಾರಿಕ ಇಬ್ಬಂದಿತನದ ಮುಂದುವರೆದ ಭಾಗವೇ ಅಗುತ್ತದೆ.

ನಮ್ಮ ದೇಶದ ಸಂವಿಧಾನ ಪ್ರತಿಯೊಬ್ಬ ಪ್ರಜೆಗೂ ರಕ್ಷಣೆ ನೀಡುವ ಭರವಸೆಯನ್ನು ನೀಡಿದೆ. ತಮ್ಮನ್ನಾಳುವ ಪ್ರಭುತ್ವವು ತಮ್ಮ ಜೀವರಕ್ಷಣೆಯ ಖಾತ್ರಿ ನೀಡಲಿ ಎಂದು ನಿರೀಕ್ಷಿಸುವುದು ಪ್ರತಿ ವ್ಯಕ್ತಿಯ ಮೂಲಭೂತ ಹಕ್ಕೂ ಹೌದು. ಇದೇ ಹಕ್ಕಿನಲ್ಲಿ ಬೇರೆಯವರಿಂದ ವಿನಾಕಾರಣ ಉಪಟಳಕ್ಕೆ ಈಡಾಗದೆ ಇರುವ ಹಕ್ಕೂ ಸೇರಿಕೊಳ್ಳುತ್ತದೆ. ಆದರೆ ಬಹುಸಂಖ್ಯಾತರು ಅಲ್ಪಸಂಖ್ಯಾತ ಸಮುದಾಯದವರಿಂದ ತೊಂದರೆಗೊಳಗಾದಾಗಲೆಲ್ಲ ನಮ್ಮ ಬುದ್ಧಿಜೀವಿ ವರ್ಗ ನೀವು ಸಹಿಷ್ಣುಗಳಾಗಿರಿ ಎಂದು ನೀತಿ ಬೋಧೆ ಮಾಡುತ್ತದೆ. ಹಾಗಂತ ಅನ್ಯರಿಗೆ ತೊಂದರೆ ಕೊಡಬೇಡಿ ಅಂತ ತೊಂದರೆ ಕೊಡುವವರಿಗೆ ಸೂಚಿಸುವುದಿಲ್ಲ.

ಇದು ಸಹಿಷ್ಣುತೆ ಎಂಬ ಪದವನ್ನುಪಯೋಗಿಸಿಕೊಂಡು ಮಾಡುವ ಠಕ್ಕ ಕೆಲಸವೇ ಅಲ್ಲವೇ? ತೊಂದರೆಗೊಳಗಾದವರು ಸಹಿಷ್ಣುಗಳಾಗಿರಲಿ ಎಂದರೆ ಏನರ್ಥ? ತೊಂದರೆ ಕೊಡುವವರು ಸುಖವಾಗಿರಲಿ, ಅವರಿಗೆ ಏನೂ ಅಪಾಯವಾಗದಿರಲಿ ಎಂದರ್ಥವೇ? ಸಹಿಷ್ಣುತೆಯ ಪಾಠ ಹೇಳಿಕೊಡುವವರು ಉತ್ತರಿಸಬೇಕು.

ಅವರು ಅಲ್ಪಸಂಖ್ಯಾತರಿರಲಿ ಅಥವಾ ಬಹುಸಂಖ್ಯಾತರಿರಲಿ ಇನ್ನೊಬ್ಬರಿಗೆ ತೊಂದರೆ ಕೊಟ್ಟಾಗ ತೊಂದರೆಗೊಳಗಾದವನಿಗೆ ಸಹಿಷ್ಣುತೆಯ ಪಾಠ ಹೇಳಿಕೊಡುವುದಕ್ಕಿಂತ ತೊಂದರೆ ನೀಡಿದವನಿಗೆ ಕಿವಿಹಿಂಡಿ ಬುದ್ಧಿ ಹೇಳಬೇಕಾಗುತ್ತದೆ. ಅದಲ್ಲದೇ ಸಂವಿಧಾನದಲ್ಲಿಯೇ ಘನತೆಯಿಂದ ಬದುಕುವ ಹಕ್ಕನ್ನು ಪ್ರತಿಯೊಬ್ಬ ವ್ಯಕ್ತಿಗೂ ನೀಡಿರುವುದರಿಂದ ಅವನು ತೊಂದರೆಗೆ ಒಳಗಾದಾಗ ಸಹಿಷ್ಣುವಾಗಿರುವ ಅವಶ್ಯಕತೆಗಿಂತ ಹೆಚ್ಚಾಗಿ ತೊಂದರೆ ನೀಡಿದವನಿಗೆ ಶಿಕ್ಷೆ ನೀಡಬೇಕಾದ ಅಗತ್ಯತೆ ಹೆಚ್ಚಿರುತ್ತದೆ.

ಮೊನ್ನೆ ಬಂಟ್ವಾಳದ ಕಾಲೇಜೊಂದರಲ್ಲಿ ಸಮವಸ್ತ್ರದ ವಿಚಾರವಾಗಿ ನಡೆದ ವಿವಾದದ ಸಮಯದಲ್ಲೂ ಬಹುಸಂಖ್ಯಾತರಿಗೆ ಸಹಿಷ್ಣುಗಳಾಗಿರಲು ಸೂಚಿಸಲಾಯಿತು. ಅಲ್ಪಸಂಖ್ಯಾತರಿಗೆ ತಮ್ಮ ಧರ್ಮವನ್ನು ಆಚರಿಸುವ ಹಕ್ಕು ಸಂವಿಧಾನದತ್ತವಾಗಿಯೇ ಇದೆ ಹಾಗಾಗಿ ಅವರು ವಸ್ತ್ರಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸುವ ಅಗತ್ಯವೇ ಇಲ್ಲ ಎಂದೂ ವಾದಿಸಲಾಯಿತು. ಅಲ್ಪಸಂಖ್ಯಾತ ಸಮುದಾಯದವರೊಬ್ಬರು ತಮ್ಮ ಧರ್ಮವನ್ನು ಮುಂದಿಟ್ಟುಕೊಂಡು ಕಾಲೇಜಿನ ನಿಯಮವನ್ನು ಅನುಸರಿಸುವುದಿಲ್ಲ ಎಂದರೆ ಕಾಲೇಜಿನಲ್ಲಿ ನಿಯಮಗಳನ್ನು ತರುವುದಾದರೂ ಏತಕ್ಕೆ? ಇದೇ ರೀತಿ ಅಲ್ಪಸಂಖ್ಯಾತ ಸಮುದಾಯದವರು ಕರ್ನಾಟದಾದ್ಯಂತ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಬ್ರಾಹ್ಮಣನೊಬ್ಬ ಕಚ್ಚೆ-ಪಂಜೆಯನ್ನುಟ್ಟುಕೊಂಡು ಬರುತ್ತೇನೆ ಅಂದರೆ ಅದನ್ನು ನಮ್ಮ ಬುದ್ಧಿಜೀವಿಗಳು ಒಪ್ಪುತ್ತಾರೆಯೇ? ಆಗ ನಮ್ಮ ಪ್ರಗತಿಪರರು ಅಲ್ಪಸಂಖ್ಯಾತರಿಗೆ ಸಹಿಷ್ಣುತೆಯ ಪಾಠ ಮಾಡಬಲ್ಲರೇ? ನಮ್ಮ ವಿಚಾರವಾದಿಗಳ, ಪ್ರಗತಿಪರರ ಇಂಥ ಇಬ್ಬಂದಿತನವೇ ಇಂದು ಅಲ್ಪಸಂಖ್ಯಾತರನ್ನು ದೇಶದ ಮುಖ್ಯವಾಹಿನಿಯಿಂದ ದೂರ ಸರಿಸುತ್ತಿದೆ.

ಹಾಗಂತ ಯಾವ ಅಲ್ಪಸಂಖ್ಯಾತರೂ ಈ ದೇಶಕ್ಕೆ ಎಂದಿಗೂ ಹೊರೆಯಲ್ಲ. ಅವರೆಲ್ಲರೂ ಈ ದೇಶದ ಮಕ್ಕಳೇ ಆಗಿರುತ್ತಾರೆ. ಜೈನ, ಬೌದ್ಧ, ಪಾರ್ಸಿ, ಶಕ, ಹೂಣರಂಥ ಅನೇಕ ಅಲ್ಪಸಂಖ್ಯಾತ ಸಮುದಾಯವನ್ನು ತನ್ನವರನ್ನಾಗಿಸಿಕೊಂದಿರುವ ಭಾರತೀಯ ಸಮಾಜಕ್ಕೆ ಮುಸ್ಲಿಂ, ಕ್ರಿಶ್ಚಿಯನ್ ಎಂದಿಗೂ ಹೊರೆಯಾಗಲು ಸಾಧ್ಯವಿಲ್ಲ. ಆದರೆ ಆ ಸಮುದಾಯ ಕೂಡ ಕೆಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾದ ಅಗತ್ಯತೆಯಿರುತ್ತದೆ. ಸಮಾನ ನಾಗರಿಕ ಸಂಹಿತೆಯನ್ನು ಒಪ್ಪಿಕೊಳ್ಳುವುದು ಕೂಡ ಈ ಹೊಂದಾಣಿಕೆಯ ಪ್ರಕ್ರಿಯೆಯ ಒಂದು ಭಾಗವೇ ಆಗಿರುತ್ತದೆ. ಸಮಾನ ನಾಗರಿಕ ಸಂಹಿತೆಯನ್ನು ಒಪ್ಪಿಕೊಳ್ಳದೇ ಇರುವುದು ಮತ್ತು ಎಲ್ಲರೂ ಪಾಲಿಸುವ ವಸ್ತ್ರಸಂಹಿತೆಯನ್ನು ಪಾಲಿಸಲು ಒಪ್ಪದೇ ಇರುವುದೂ ಕೆಲ ಮಂದಿ ಅಲ್ಪಸಂಖ್ಯಾತರ ಅಸಹಿಷ್ಣುತೆಯ ರೂಪವಾಗುತ್ತದೆ. ಸಮಾಜದೊಂದಿಗೆ ಬೆರೆಯದೆ ಪ್ರತ್ಯೇಕತೆಯನ್ನು ಉಳಿಸಿಕೊಳ್ಳುವ ಮನಸ್ಥಿತಿಯ ಪ್ರತೀಕವಾಗುತ್ತದೆ.

ಇವತ್ತು ಸಹಿಷ್ಣುತೆಗಿಂತ ಹೆಚ್ಚು ಬೇಕಾಗಿರುವುದು ಸಮರಸತೆ. ಸಮರಸತೆಯಲ್ಲಿ ಯಾರೂ ಯಾರನ್ನೂ ಸಹಿಸಿಕೊಳ್ಳುವ ಅಗತ್ಯವಿರುವುದಿಲ್ಲ. ಬದಲಿಗೆ ಅಲ್ಲಿ ಒಬ್ಬರು ಇನ್ನೊಬ್ಬರನ್ನು ಪ್ರೀತಿಸಲು ಕಾರಣಗಳಿರುತ್ತವೆ. ನಿನಗೆ ನೋವಾಗುವಂಥ ಕೆಲಸವನ್ನು ನಾನು ಮಾಡಲಾರೆ; ನನಗೆ ನೋವಾಗುವಂಥದ್ದನ್ನು ನೀನೂ ಮಾಡಬೇಡ ಎಂಬ ಹೊಂದಾಣಿಕೆ, ಪರಸ್ಪರರ ಸಂವೇದನೆಗಳನ್ನು ಅರಿತುಕೊಳ್ಳುವ ಮನೋಭಾವ ಇಂದಿನ ಅಗತ್ಯ. ಅದಕ್ಕೆ ತೆರೆದ ಮನಸ್ಸು ಮತ್ತು ಬದಲಾವಣೆಗೆ ಒಪ್ಪಿಕೊಳ್ಳುವ ನಾಯಕತ್ವ ಬೇಕು. ಎಲ್ಲ ಮತ-ಧರ್ಮಗಳಲ್ಲಿಯೂ ಇರುವ ಹುಳುಕಗಳನ್ನು ಮತ್ತು ಜಾಡ್ಯಗಳನ್ನು ತೊಲಗಿಸುವ ಎದೆಗಾರಿಕೆ ಬೇಕು. ರಾಜಕೀಯ ಮತ್ತು ಧಾರ್ಮಿಕ ಆಯಾಮವನ್ನು ಮೀರಿದ ಸಮಾಜಮುಖಿ ಚಿಂತನೆಯುಳ್ಳ ಯುವಕರು ಬೇಕು. ಅಲ್ಲದೆ ನಮ್ಮ ಬುದ್ಧಿಜೀವಿ, ವಿಚಾರವಾದಿ ವರ್ಗದ ಬೆಂಬಲವೂ ಬೇಕಾಗುತ್ತದೆ.

ಆ ಒಂದು ನವ ದಿಗಂತದೆಡೆಗೆ ಮನಸ್ಸನ್ನು ತಿರುಗಿಸೋಣ. ಬದಲಿಗೆ ಸಹಿಷ್ಣುತೆಯ ಹೆಸರಿನಲ್ಲಿ ಅಲ್ಪಸಂಖ್ಯಾತರಲ್ಲಿ ಪ್ರತ್ಯೇಕತೆಯ ಮನೋಭಾವವನ್ನು ಬಿತ್ತುವುದು ಬೇಡ.

 

Hits

Against Terrorism

ವಿರಾಟ್ Copyright © 2009 BeMagazine Blogger Template is Designed by Blogger Template
In Collaboration with fifa