ಸಹಿಷ್ಣುತೆಯ ಪಾಠ; ಪ್ರತ್ಯೇಕತೆಯ ಆಟ
ಭಾರತದಲ್ಲಿ ಕೋಮುಗಲಭೆಗಳು ಸಂಭವಿಸುವುದು, ಕೋಮುಗಲಭೆಗಳು ಅತಿರೇಕದ ಹಂತ ಮುಟ್ಟಿ, ಗಲಭೆ ನಡೆಸಿದವರಿಗೇ ಸುಸ್ತಾಗಿ ನಂತರ ತಣ್ಣಗಾಗುವುದು ನಮ್ಮಲ್ಲಿ ಯಾರಿಗೂ ಹೊಸ ವಿಚಾರವಲ್ಲ. ಹಾಗೆ ಗಲಭೆಗಳು ಸಂಭವಿಸಿ ತಣ್ಣಗಾದ ನಂತರ ಒಂದಿಷ್ಟು ಮಂದಿ ಸೇರಿ ಶಾಂತಿ ಸಭೆ ನಡೆಸಿ ಪತ್ರಿಕೆಗಳಲ್ಲಿ ಫೋಟೊ ಹಾಕಿಸಿಕೊಳ್ಳುವುದು, ಇನ್ನೊಂದಿಷ್ಟು ಮಂದಿ (ಅತಿ)ಬುದ್ಧಿಜೀವಿಗಳು ’ಸತ್ಯಶೋಧನಾ ಸಮಿತಿ’ ಎಂಬ ಹೆಸರಿನಲ್ಲಿ ತಂಡವೊಂದನ್ನು ಕಟ್ಟಿಕೊಂಡು ಗಲಭೆ ನಡೆದ ಸ್ಥಳಕ್ಕೆ ಸ್ವಯಂಪ್ರೇರಣೆಯಿಂದ ತೆರಳಿ ’ಸತ್ಯಶೋಧನೆ’ ನಡೆಸುವುದು ಕೂಡ ನಮ್ಮ ಪಾಲಿಗೆ ತೀರಾ ಸಾಮಾನ್ಯ ಎಂಬಂತಾಗಿಬಿಟ್ಟಿದೆ.
ಹೆಚ್ಚಿನ ಸತ್ಯಶೋಧನಾ ಸಮಿತಿಗಳ ವರದಿಗಳು ಸಾಮಾನ್ಯವಾಗಿ ಒಂದೇ ರೀತಿ ರೀತಿಯಲ್ಲಿ ಇರುತ್ತವೆ ಎಂಬುದೂ ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ.
ಕೋಮುಗಲಭೆಗಳಿಗೆಲ್ಲ ಭಾರತದ ಬಹುಸಂಖ್ಯಾತರೇ ಕಾರಣರು. ಬಹುಸಂಖ್ಯಾತ ಸಮುದಾಯವನ್ನು ಪ್ರತಿನಿಧಿಸುವ ಸಂಘಟನೆಗಳೆಲ್ಲಾ ಕೋಮುವಾದವನ್ನೇ ಪ್ರತಿಪಾದಿಸುತ್ತವೆ ಮತ್ತು ಈ ದೇಶದಲ್ಲಿ ನಡೆಯುವ ಎಲ್ಲ ಕೋಮುಗಲಭೆಗಳಿಗೂ ಬಹುಸಂಖ್ಯಾತ ಸಮುದಾಯವನ್ನು ಪ್ರತಿನಿಧಿಸುವ ಸಂಘಟನೆಗಳೇ ಕಾರಣ ಎಂದು ಷರಾ ಬರೆಯುವುದು ನಮ್ಮಲ್ಲಿ ಅನೂಚಾನವಾಗಿ ನಡೆದುಕೊಂಡು ಬಂದ ಪದ್ಧತಿಯೇ ಆಗಿದೆ. ದೇಶದ ಬಹುಸಂಖ್ಯಾತರ ಸಂಘಟನೆಗಳೇ ಕೋಮುಗಲಭೆಯನ್ನು ಪ್ರಚೋದಿಸುತ್ತವೆ ಎಂಬುದನ್ನು ಬಹುಷಃ ಈ ಸತ್ಯಶೋಧನಾ ಸಮಿತಿಗಳು ಘಟನಾಸ್ಥಳಕ್ಕೆ ಆಗಮಿಸುವ ಮೊದಲೇ ನಿರ್ಧರಿಸಿಕೊಂಡು ಬಂದಿರುತ್ತವೆಯೇನೋ?!
ಅದಿರಲಿ. ಗಲಭೆಗಳು ನಡೆದ ಅನಂತರದಲ್ಲಿ ಬಹುಸಂಖ್ಯಾತ ಸಮುದಾಯದವರಿಗೆ ನೀವು ಸಹಿಷ್ಣುಗಳಾಗಿರಿ ಎಂದು ಹೇಳುವುದು ನಮ್ಮ ನಾಡಿನ ಬುದ್ಧಿಜೀವಿಗಳಿಗೆ, ವಿಚಾರವಾದಿಗಳಿಗೆ ಹುಟ್ಟುತ್ತಲೇ ಸಿದ್ಧಿಸಿರುವ ಕಲೆ.
ಸಹಿಷ್ಣು ಎಂಬ ಪದದ ವಾಚ್ಯಾರ್ಥ ಮತ್ತು ಭಾವಾರ್ಥ ಕಷ್ಟವನ್ನು ಸಹಿಸಿಕೊ ಎಂದಾಗುತ್ತದೆ. (ಸಹಿಷ್ಣು ಎಂಬ ಪದದ ಅರ್ಥ ಇದಲ್ಲ ಎಂದಾದರೆ ನಿಜಾರ್ಥ ಯಾವುದು ಎಂಬುದನ್ನು ಅಲ್ಲಗಳೆಯುವವರೇ ತಿಳಿಸಿಕೊಡಬೇಕು.)
ಮನುಷ್ಯನಾದವನು ಕಟುಕನನ್ನು ಸಹಿಸಿಕೊಳ್ಳಬೇಕಾಗುತ್ತದೆ. ಕಷ್ಟಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ. ಅನ್ಯಾಯಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ. ಹಾಗೂ ಇನ್ನೂ ಅನೇಕ ಅಸಹಜ ಸಂಗತಿಗಳನ್ನು, ತಮ್ಮ ನಿರೀಕ್ಷೆಗೆ ವಿರುದ್ಧವಾಗಿ ಸಾಗುವ ಸಂಗತಿಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ. ಆದರೆ ಯಾರಿಗೂ ಕೂಡ ಸಹಜತೆಯನ್ನು ಸಹಿಸಿಕೊಳ್ಳುವ ಅಗತ್ಯವಿರುವುದಿಲ್ಲ.
ಮಲೆನಾಡಿನಲ್ಲಿ ಹುಟ್ಟಿದವನಿಗೆ ಜಡಿಮಳೆಯನ್ನು ಸಹಿಸಿಕೊಳ್ಳಬೇಕಾದ ಅಗತ್ಯವಿರುವುದಿಲ್ಲ; ಅವನಿಗೆ ಆ ಮಳೆಯನ್ನು ಒಫ್ಫಿಕೊಳ್ಳುವ ಅಗತ್ಯವಿರುತ್ತದೆ. ಏಕೆಂದರೆ ಮಲೆನಾಡಿನ ಪ್ರಕೃತಿಯೇ ಜಡಿಮಳೆಯನ್ನು ಪೋಷಿಸುತ್ತಿರುತ್ತದೆ. ಆದರೆ ಅದೇ ಮಲಿನಾಡಿನವನಿಗೆ ಬಯಲುಸೀಮೆಯ ಬಿರುಸೆಖೆ ಅಸಹನೀಯವೆನಿಸುತ್ತದೆ. ಅವನು ಕೆಲವು ಸಂದರ್ಭಗಳಲ್ಲಿ ಆ ಸೆಖೆಯನ್ನು ಸಹಿಸಿಕೊಳ್ಳಬೇಕಾಗುತ್ತದೆ. ಯಾವುದು ಅವನ ಪ್ರಕೃತಿಗೆ ವಿರುದ್ಧವೋ ಅದನ್ನು ಅವನು ಸಹಿಸಿಕೊಳ್ಳಬೇಕು. ಯಾವುದು ಅವನ ಪ್ರಕೃತಿಗೆ ಪೂರಕವೋ ಅದನ್ನು ಆತ ಖುಷಿಯಿಂದ ಅನುಭವಿಸಬೇಕು ಮತ್ತು ಅನುಭವಿಸುತ್ತಾನೆ.
ಅಂದರೆ ಸಹಿಷ್ಣುಗಳಾಗಿರುವುದು ಅಂದರೆ ನಮಗೆ ಅಸಹನೀಯವೆನಿಸುವುದನ್ನೂ ಸಹಿಸಿಕೊಳ್ಳುವುದು. ಅಥವಾ ನಮಗೆ ಒಗ್ಗಿಬರದ್ದನ್ನು ಸಹಿಸಿಕೊಳ್ಳುವುದು. ಅದರ ಜೊತೆಗೆ ಕೆಲವು ಹೊಂದಾಣಿಕೆಗಳನ್ನು ಮಾಡಿಕೊಂಡು ಬದುಕುವುದು ಎಂದರ್ಥ.
ಈ ದೇಶದ ಬಹುಸಂಖ್ಯಾತ ಸಮುದಾಯದವರ ಬಳಿ ನೀವು ಸಹಿಷ್ಣುಗಳಾಗಿರಬೇಕು ಎಂದು ಬುದ್ಧಿಜೀವಿಗಳು ಉಪದೇಶಿಸುವುದೂ ಇದೇ ಅರ್ಥದಲ್ಲಿಯೇ.
ಸರಿ, ಈ ರೀತಿಯ ಸಹಿಷ್ಣುತೆ ಪ್ರಜಾಪ್ರಭುತ್ವವಿರುವ ದೇಶದಲ್ಲಿ ಒಂದು ಹಂತದವರೆಗೆ ಅನಿವಾರ್ಯ. ಯಾರೂ ಅದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಅದಲ್ಲದೆ ನಮ್ಮ ಸಂವಿಧಾನ ಪ್ರತಿಯೊಬ್ಬರಿಗೂ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿರುವಾಗ, ವಿವಿಧ ಮತ-ಧರ್ಮಗಳ ನಡುವೆ ಸಾಮರಸ್ಯವಿರಲು ಸಹಿಷ್ಣುತೆ ಅತ್ಯಗತ್ಯ. ಆದರೆ ಇವತ್ತು ಬಹುಸಂಖ್ಯಾತ ಸಮುದಾಯದವರನ್ನು ಸಹಿಷ್ಣುಗಳಾಗಿರಿ ಎಂದು ಹೇಳುವುದು ಮತ್ತು ಅಲ್ಪಸಂಖ್ಯಾತ ಸಮುದಾಯದ ಅಸಹಿಷ್ಣುತೆಯ ಬಗ್ಗೆ ಜಾಣ ಮೌನ ತೋರಿಸುವುದು ಬುದ್ಧಿಜೀವಿ ವರ್ಗ ಯಾವತ್ತಿಂದಲೂ ಬೆಳೆಸಿಕೊಂಡು ಬಂದಿರುವ ವೈಚಾರಿಕ ಇಬ್ಬಂದಿತನದ ಮುಂದುವರೆದ ಭಾಗವೇ ಅಗುತ್ತದೆ.
ನಮ್ಮ ದೇಶದ ಸಂವಿಧಾನ ಪ್ರತಿಯೊಬ್ಬ ಪ್ರಜೆಗೂ ರಕ್ಷಣೆ ನೀಡುವ ಭರವಸೆಯನ್ನು ನೀಡಿದೆ. ತಮ್ಮನ್ನಾಳುವ ಪ್ರಭುತ್ವವು ತಮ್ಮ ಜೀವರಕ್ಷಣೆಯ ಖಾತ್ರಿ ನೀಡಲಿ ಎಂದು ನಿರೀಕ್ಷಿಸುವುದು ಪ್ರತಿ ವ್ಯಕ್ತಿಯ ಮೂಲಭೂತ ಹಕ್ಕೂ ಹೌದು. ಇದೇ ಹಕ್ಕಿನಲ್ಲಿ ಬೇರೆಯವರಿಂದ ವಿನಾಕಾರಣ ಉಪಟಳಕ್ಕೆ ಈಡಾಗದೆ ಇರುವ ಹಕ್ಕೂ ಸೇರಿಕೊಳ್ಳುತ್ತದೆ. ಆದರೆ ಬಹುಸಂಖ್ಯಾತರು ಅಲ್ಪಸಂಖ್ಯಾತ ಸಮುದಾಯದವರಿಂದ ತೊಂದರೆಗೊಳಗಾದಾಗಲೆಲ್ಲ ನಮ್ಮ ಬುದ್ಧಿಜೀವಿ ವರ್ಗ ನೀವು ಸಹಿಷ್ಣುಗಳಾಗಿರಿ ಎಂದು ನೀತಿ ಬೋಧೆ ಮಾಡುತ್ತದೆ. ಹಾಗಂತ ಅನ್ಯರಿಗೆ ತೊಂದರೆ ಕೊಡಬೇಡಿ ಅಂತ ತೊಂದರೆ ಕೊಡುವವರಿಗೆ ಸೂಚಿಸುವುದಿಲ್ಲ.
ಇದು ಸಹಿಷ್ಣುತೆ ಎಂಬ ಪದವನ್ನುಪಯೋಗಿಸಿಕೊಂಡು ಮಾಡುವ ಠಕ್ಕ ಕೆಲಸವೇ ಅಲ್ಲವೇ? ತೊಂದರೆಗೊಳಗಾದವರು ಸಹಿಷ್ಣುಗಳಾಗಿರಲಿ ಎಂದರೆ ಏನರ್ಥ? ತೊಂದರೆ ಕೊಡುವವರು ಸುಖವಾಗಿರಲಿ, ಅವರಿಗೆ ಏನೂ ಅಪಾಯವಾಗದಿರಲಿ ಎಂದರ್ಥವೇ? ಸಹಿಷ್ಣುತೆಯ ಪಾಠ ಹೇಳಿಕೊಡುವವರು ಉತ್ತರಿಸಬೇಕು.
ಅವರು ಅಲ್ಪಸಂಖ್ಯಾತರಿರಲಿ ಅಥವಾ ಬಹುಸಂಖ್ಯಾತರಿರಲಿ ಇನ್ನೊಬ್ಬರಿಗೆ ತೊಂದರೆ ಕೊಟ್ಟಾಗ ತೊಂದರೆಗೊಳಗಾದವನಿಗೆ ಸಹಿಷ್ಣುತೆಯ ಪಾಠ ಹೇಳಿಕೊಡುವುದಕ್ಕಿಂತ ತೊಂದರೆ ನೀಡಿದವನಿಗೆ ಕಿವಿಹಿಂಡಿ ಬುದ್ಧಿ ಹೇಳಬೇಕಾಗುತ್ತದೆ. ಅದಲ್ಲದೇ ಸಂವಿಧಾನದಲ್ಲಿಯೇ ಘನತೆಯಿಂದ ಬದುಕುವ ಹಕ್ಕನ್ನು ಪ್ರತಿಯೊಬ್ಬ ವ್ಯಕ್ತಿಗೂ ನೀಡಿರುವುದರಿಂದ ಅವನು ತೊಂದರೆಗೆ ಒಳಗಾದಾಗ ಸಹಿಷ್ಣುವಾಗಿರುವ ಅವಶ್ಯಕತೆಗಿಂತ ಹೆಚ್ಚಾಗಿ ತೊಂದರೆ ನೀಡಿದವನಿಗೆ ಶಿಕ್ಷೆ ನೀಡಬೇಕಾದ ಅಗತ್ಯತೆ ಹೆಚ್ಚಿರುತ್ತದೆ.
ಮೊನ್ನೆ ಬಂಟ್ವಾಳದ ಕಾಲೇಜೊಂದರಲ್ಲಿ ಸಮವಸ್ತ್ರದ ವಿಚಾರವಾಗಿ ನಡೆದ ವಿವಾದದ ಸಮಯದಲ್ಲೂ ಬಹುಸಂಖ್ಯಾತರಿಗೆ ಸಹಿಷ್ಣುಗಳಾಗಿರಲು ಸೂಚಿಸಲಾಯಿತು. ಅಲ್ಪಸಂಖ್ಯಾತರಿಗೆ ತಮ್ಮ ಧರ್ಮವನ್ನು ಆಚರಿಸುವ ಹಕ್ಕು ಸಂವಿಧಾನದತ್ತವಾಗಿಯೇ ಇದೆ ಹಾಗಾಗಿ ಅವರು ವಸ್ತ್ರಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸುವ ಅಗತ್ಯವೇ ಇಲ್ಲ ಎಂದೂ ವಾದಿಸಲಾಯಿತು. ಅಲ್ಪಸಂಖ್ಯಾತ ಸಮುದಾಯದವರೊಬ್ಬರು ತಮ್ಮ ಧರ್ಮವನ್ನು ಮುಂದಿಟ್ಟುಕೊಂಡು ಕಾಲೇಜಿನ ನಿಯಮವನ್ನು ಅನುಸರಿಸುವುದಿಲ್ಲ ಎಂದರೆ ಕಾಲೇಜಿನಲ್ಲಿ ನಿಯಮಗಳನ್ನು ತರುವುದಾದರೂ ಏತಕ್ಕೆ? ಇದೇ ರೀತಿ ಅಲ್ಪಸಂಖ್ಯಾತ ಸಮುದಾಯದವರು ಕರ್ನಾಟದಾದ್ಯಂತ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಬ್ರಾಹ್ಮಣನೊಬ್ಬ ಕಚ್ಚೆ-ಪಂಜೆಯನ್ನುಟ್ಟುಕೊಂಡು ಬರುತ್ತೇನೆ ಅಂದರೆ ಅದನ್ನು ನಮ್ಮ ಬುದ್ಧಿಜೀವಿಗಳು ಒಪ್ಪುತ್ತಾರೆಯೇ? ಆಗ ನಮ್ಮ ಪ್ರಗತಿಪರರು ಅಲ್ಪಸಂಖ್ಯಾತರಿಗೆ ಸಹಿಷ್ಣುತೆಯ ಪಾಠ ಮಾಡಬಲ್ಲರೇ? ನಮ್ಮ ವಿಚಾರವಾದಿಗಳ, ಪ್ರಗತಿಪರರ ಇಂಥ ಇಬ್ಬಂದಿತನವೇ ಇಂದು ಅಲ್ಪಸಂಖ್ಯಾತರನ್ನು ದೇಶದ ಮುಖ್ಯವಾಹಿನಿಯಿಂದ ದೂರ ಸರಿಸುತ್ತಿದೆ.
ಹಾಗಂತ ಯಾವ ಅಲ್ಪಸಂಖ್ಯಾತರೂ ಈ ದೇಶಕ್ಕೆ ಎಂದಿಗೂ ಹೊರೆಯಲ್ಲ. ಅವರೆಲ್ಲರೂ ಈ ದೇಶದ ಮಕ್ಕಳೇ ಆಗಿರುತ್ತಾರೆ. ಜೈನ, ಬೌದ್ಧ, ಪಾರ್ಸಿ, ಶಕ, ಹೂಣರಂಥ ಅನೇಕ ಅಲ್ಪಸಂಖ್ಯಾತ ಸಮುದಾಯವನ್ನು ತನ್ನವರನ್ನಾಗಿಸಿಕೊಂದಿರುವ ಭಾರತೀಯ ಸಮಾಜಕ್ಕೆ ಮುಸ್ಲಿಂ, ಕ್ರಿಶ್ಚಿಯನ್ ಎಂದಿಗೂ ಹೊರೆಯಾಗಲು ಸಾಧ್ಯವಿಲ್ಲ. ಆದರೆ ಆ ಸಮುದಾಯ ಕೂಡ ಕೆಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾದ ಅಗತ್ಯತೆಯಿರುತ್ತದೆ. ಸಮಾನ ನಾಗರಿಕ ಸಂಹಿತೆಯನ್ನು ಒಪ್ಪಿಕೊಳ್ಳುವುದು ಕೂಡ ಈ ಹೊಂದಾಣಿಕೆಯ ಪ್ರಕ್ರಿಯೆಯ ಒಂದು ಭಾಗವೇ ಆಗಿರುತ್ತದೆ. ಸಮಾನ ನಾಗರಿಕ ಸಂಹಿತೆಯನ್ನು ಒಪ್ಪಿಕೊಳ್ಳದೇ ಇರುವುದು ಮತ್ತು ಎಲ್ಲರೂ ಪಾಲಿಸುವ ವಸ್ತ್ರಸಂಹಿತೆಯನ್ನು ಪಾಲಿಸಲು ಒಪ್ಪದೇ ಇರುವುದೂ ಕೆಲ ಮಂದಿ ಅಲ್ಪಸಂಖ್ಯಾತರ ಅಸಹಿಷ್ಣುತೆಯ ರೂಪವಾಗುತ್ತದೆ. ಸಮಾಜದೊಂದಿಗೆ ಬೆರೆಯದೆ ಪ್ರತ್ಯೇಕತೆಯನ್ನು ಉಳಿಸಿಕೊಳ್ಳುವ ಮನಸ್ಥಿತಿಯ ಪ್ರತೀಕವಾಗುತ್ತದೆ.
ಇವತ್ತು ಸಹಿಷ್ಣುತೆಗಿಂತ ಹೆಚ್ಚು ಬೇಕಾಗಿರುವುದು ಸಮರಸತೆ. ಸಮರಸತೆಯಲ್ಲಿ ಯಾರೂ ಯಾರನ್ನೂ ಸಹಿಸಿಕೊಳ್ಳುವ ಅಗತ್ಯವಿರುವುದಿಲ್ಲ. ಬದಲಿಗೆ ಅಲ್ಲಿ ಒಬ್ಬರು ಇನ್ನೊಬ್ಬರನ್ನು ಪ್ರೀತಿಸಲು ಕಾರಣಗಳಿರುತ್ತವೆ. ನಿನಗೆ ನೋವಾಗುವಂಥ ಕೆಲಸವನ್ನು ನಾನು ಮಾಡಲಾರೆ; ನನಗೆ ನೋವಾಗುವಂಥದ್ದನ್ನು ನೀನೂ ಮಾಡಬೇಡ ಎಂಬ ಹೊಂದಾಣಿಕೆ, ಪರಸ್ಪರರ ಸಂವೇದನೆಗಳನ್ನು ಅರಿತುಕೊಳ್ಳುವ ಮನೋಭಾವ ಇಂದಿನ ಅಗತ್ಯ. ಅದಕ್ಕೆ ತೆರೆದ ಮನಸ್ಸು ಮತ್ತು ಬದಲಾವಣೆಗೆ ಒಪ್ಪಿಕೊಳ್ಳುವ ನಾಯಕತ್ವ ಬೇಕು. ಎಲ್ಲ ಮತ-ಧರ್ಮಗಳಲ್ಲಿಯೂ ಇರುವ ಹುಳುಕಗಳನ್ನು ಮತ್ತು ಜಾಡ್ಯಗಳನ್ನು ತೊಲಗಿಸುವ ಎದೆಗಾರಿಕೆ ಬೇಕು. ರಾಜಕೀಯ ಮತ್ತು ಧಾರ್ಮಿಕ ಆಯಾಮವನ್ನು ಮೀರಿದ ಸಮಾಜಮುಖಿ ಚಿಂತನೆಯುಳ್ಳ ಯುವಕರು ಬೇಕು. ಅಲ್ಲದೆ ನಮ್ಮ ಬುದ್ಧಿಜೀವಿ, ವಿಚಾರವಾದಿ ವರ್ಗದ ಬೆಂಬಲವೂ ಬೇಕಾಗುತ್ತದೆ.
ಆ ಒಂದು ನವ ದಿಗಂತದೆಡೆಗೆ ಮನಸ್ಸನ್ನು ತಿರುಗಿಸೋಣ. ಬದಲಿಗೆ ಸಹಿಷ್ಣುತೆಯ ಹೆಸರಿನಲ್ಲಿ ಅಲ್ಪಸಂಖ್ಯಾತರಲ್ಲಿ ಪ್ರತ್ಯೇಕತೆಯ ಮನೋಭಾವವನ್ನು ಬಿತ್ತುವುದು ಬೇಡ.
